ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಸಾಲುಗಟ್ಟಿ ನಿಂತಿರುವ ತ್ಯಾಜ್ಯ ತುಂಬಿದ ಕಾಂಪ್ಯಾಕ್ಟರ್ಗಳು ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಬೆಂಗಳೂರು: ‘ತ್ಯಾಜ್ಯ ವಿಲೇವಾರಿಗಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಸಮಸ್ಯೆ ಪದೇಪದೆ ಏಕೆ ಉದ್ಭವಿಸುತ್ತಿದೆ? ಮಿಟ್ಟಗಾನಹಳ್ಳಿ–ಬೆಳ್ಳಹಳ್ಳಿ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರುವ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್ನ ಎಂ. ನಾಗರಾಜು ಅವರು ಒತ್ತಾಯಿಸಿದರು.
‘ಪ್ರಜಾವಾಣಿ’ಯ ಮಾರ್ಚ್ 13ರ ಸಂಚಿಕೆಯಲ್ಲಿ ಪ್ರಕಟವಾದ ‘ತಾಜ್ಯ ವಿಲೇವಾರಿಗೆ ಕಣ್ಣೂರು ತಡೆ’ ವಿಶೇಷ ವರದಿಯ ಕುರಿತು ವಿಧಾನ ಪರಿಷತ್ನ ಶೂನ್ಯ ವೇಳೆಯಲ್ಲಿ ಶುಕ್ರವಾರ ಪ್ರಸ್ತಾಪಿಸಿದ ಅವರು, ‘ದ್ರವ ತ್ಯಾಜ್ಯ ಗಾಳಿ, ನೀರಿಗೆಲ್ಲ ಸೇರಿಕೊಂಡು ಸಂಕಷ್ಟ ಸೃಷ್ಟಿಸುತ್ತಿದೆ. ಘನತ್ಯಾಜ್ಯ ವಿಲೇವಾರಿ ಕುರಿತು ಶೀಘ್ರ ಮತ್ತು ಶಾಶ್ವತ ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಆಗ್ರಹಿಸಿದರು.
‘ನಗರದಲ್ಲಿ ತ್ಯಾಜ್ಯ ವಿಲೇವಾರಿ ಒಂದು ಮಾಫಿಯಾ ಆಗಿದೆ. ಕೆಲವು ಶಾಸಕರು ನಮಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಇದರಲ್ಲಿ ಎಲ್ಲ ಪಕ್ಷದ ಶಾಸಕರಿದ್ದು, ಕ್ಷೇತ್ರ ಅಭಿವೃದ್ಧಿಗೆ ₹800 ಕೋಟಿ ಕೇಳುತ್ತಿದ್ದಾರೆ’ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಡಿ.ಕೆ. ಶಿವಕುಮಾರ್ ಉತ್ತರಿಸಿದರು.
‘ನಗರದ ಹೊರವಲಯದಲ್ಲಿ 100 ಎಕರೆ ಜಾಗ ನೀಡಿದರೆ, ಅದನ್ನು ಖರೀದಿ ಮಾಡಲಾಗುತ್ತದೆ. ಕಸದಿಂದ ವಿದ್ಯುತ್ ಉತ್ಪಾದನೆ ಪ್ರಯೋಗ ಹೈದರಾಬಾದ್ ಸೇರಿದಂತೆ ಹಲವೆಡೆ ವಿಫಲವಾಗಿದೆ. ಹೀಗಾಗಿ, ಕಸದಿಂದ ಅನಿಲ ಉತ್ಪಾದನೆ ಮಾಡಲಾಗುತ್ತದೆ. ದೊಡ್ಡಬಳ್ಳಾಪುರದ ಬಳಿ ಜಮೀನು ಖರೀದಿ ಮಾಡಲಾಗುತ್ತದೆ. ಕಸ ವಿಲೇವಾರಿ ಟೆಂಡರ್ ಅನ್ನೇ ಕರೆದಿಲ್ಲ. ಆದರೂ ಮಹಾನ್ ನಾಯಕರೊಬ್ಬರು, ಡಿ.ಕೆ. ಶಿವಕುಮಾರ್ ₹15 ಸಾವಿರ ಕೋಟಿ ಲೂಟಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.