ADVERTISEMENT

ತ್ಯಾಜ್ಯ ನೀರು ಸಂಸ್ಕರಣೆ: ನವೋದ್ಯಮಗಳಿಗೆ ಅವಕಾಶ ನೀಡಿದ ಬೆಂಗಳೂರು ಜಲಮಂಡಳಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 22:30 IST
Last Updated 24 ನವೆಂಬರ್ 2025, 22:30 IST
ವಿ. ರಾಮ ಪ್ರಸಾತ್ ಮನೋಹರ್ 
ವಿ. ರಾಮ ಪ್ರಸಾತ್ ಮನೋಹರ್    

ಬೆಂಗಳೂರು: ಸಂಸ್ಕರಿಸಿದ ನೀರಿನ ಸಂಶೋಧನೆ ಮತ್ತು ಮಾರುಕಟ್ಟೆ ವಿಸ್ತರಣೆಗಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ ಕಾರ್ಯನಿರ್ವಹಿಸಲು ಬೆಂಗಳೂರು ಜಲಮಂಡಳಿಯು ನವೋದ್ಯಮಗಳಿಗೆ ಅವಕಾಶ ನೀಡಿದೆ.

ಈ ಯೋಜನೆಯ ಮೊದಲ ಭಾಗವಾಗಿ, ಕಾಡುಬೀಸನಹಳ್ಳಿ ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ ಕಾರ್ಯನಿರ್ವಹಿಸಲು ಬೋಸನ್ ವೈಟ್ ವಾಟರ್ ಸಂಸ್ಥೆಗೆ ಅನುಮತಿ ನೀಡಲಾಗಿದೆ. ಯೋಜನೆಯ ಮೂಲಕ ದಿನಕ್ಕೆ 70,000 ಲೀಟರ್‌ಗಳಷ್ಟು ಗುಣಮಟ್ಟದ ಸಂಸ್ಕರಿಸಿದ ನೀರು ಬಳಕೆಗೆ ಲಭ್ಯವಾಗಲಿದೆ.

‘ನವೋದ್ಯಮಗಳಿಗೆ ಕೇವಲ ನೀರು ಒದಗಿಸುವುದಷ್ಟೇ ಅಲ್ಲದೆ, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಇದೊಂದು ಸುವರ್ಣಾವಕಾಶ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ನಗರದ ನೀರಿನ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಲಮಂಡಳಿ ಈ ಕ್ರಮ ಕೈಗೊಂಡಿದೆ’ ಎಂದು ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ADVERTISEMENT

‘ಜಲಮಂಡಳಿಯು ಈ ಯೋಜನೆಯಡಿ ಯಾವುದೇ ಬಂಡವಾಳ ಹೂಡಿಕೆ ಮಾಡುವುದಿಲ್ಲ. ಬದಲಿಗೆ, ಬೋಸನ್ ಸಂಸ್ಥೆ ಸ್ವಂತ ವೆಚ್ಚದಲ್ಲಿ ಅಗತ್ಯವಿರುವ ಅತ್ಯಾಧುನಿಕ ಶುದ್ಧೀಕರಣ ಉಪಕರಣಗಳನ್ನು ಅಳವಡಿಸಲಿದೆ. ಜಲಮಂಡಳಿಯು ಕಚ್ಚಾ ವಸ್ತುವಾಗಿ ತ್ಯಾಜ್ಯ ನೀರನ್ನು ಸರಬರಾಜು ಮಾಡಲಿದ್ದು, ಸಂಸ್ಕರಿಸಿದ ನೀರನ್ನು ಮಾರಾಟ ಮಾಡಲು ಮಾರುಕಟ್ಟೆ ಸಂಪರ್ಕ ಒದಗಿಸಲು ಸಹಾಯ ಮಾಡಲಿದೆ’ ಎಂದು ಹೇಳಿದ್ಧಾರೆ.

ಜಲಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ. - ಪ್ರಜಾವಾಣಿ ಚಿತ್ರ
ಬೆಂಗಳೂರು ನಗರ ಎದುರಿಸುತ್ತಿರುವ ನೀರಿನ ಸವಾಲುಗಳಿಗೆ ಇಲ್ಲಿನ ಸ್ಟಾರ್ಟ್‌ಅಪ್‌ಗಳ ಬಳಿ ಪರಿಹಾರವಿದೆ. ನೀರಿನ ಮರುಬಳಕೆ ಕ್ಷೇತ್ರ ಬಲಗೊಳ್ಳಲಿದ್ದು ನೀರಿನ ಸ್ವಾವಲಂಬನೆಗೆ ದಾರಿಯಾಗಲಿದೆ.
ರಾಮಪ್ರಸಾತ್‌ ಮನೋಹರ್‌ ಅಧ್ಯಕ್ಷ ಬೆಂಗಳೂರು ಜಲಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.