ADVERTISEMENT

ಬೆಂಗಳೂರು: ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 22:15 IST
Last Updated 22 ಫೆಬ್ರುವರಿ 2023, 22:15 IST
ಹಾಪ್‌ಕಾಮ್ಸ್‌ ಆಯೋಜಿಸಿದ್ದ ದ್ರಾಕ್ಷಿ–ಕಲ್ಲಂಗಡಿ ಮಾರಾಟ ಮೇಳದಲ್ಲಿ ವಿವಿಧ ತಳಿಯ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಮಹಿಳೆಯರು. –ಪ್ರಜಾವಾಣಿ ಚಿತ್ರ
ಹಾಪ್‌ಕಾಮ್ಸ್‌ ಆಯೋಜಿಸಿದ್ದ ದ್ರಾಕ್ಷಿ–ಕಲ್ಲಂಗಡಿ ಮಾರಾಟ ಮೇಳದಲ್ಲಿ ವಿವಿಧ ತಳಿಯ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಮಹಿಳೆಯರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದ ನಾನಾ ಭಾಗಗಳಲ್ಲಿ ಬೆಳೆದ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಿ ಹಾಪ್‌ಕಾಮ್ಸ್‌ ಮೂಲಕ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ’ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.

ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ (ಹಾಪ್‌ಕಾಮ್ಸ್‌) ವತಿಯಿಂದ ಬುಧವಾರ ಆಯೋಜಿಸಿದ್ದ ‘ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು. ಬೇಸಿಗೆ ಕಾಲದಲ್ಲಿ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳಿಗೆ ಬೇಡಿಕೆ ಹೆಚ್ಚು, ಆದ್ದರಿಂದ ಈ ಮೇಳವನ್ನು ಆಯೋಜಿಸಲಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಹೆಚ್ಚು ಹಣ್ಣುಗಳನ್ನು ಖರೀದಿಸುವುದರ ಮೂಲಕ ರೈತರಿಗೆ ನೆರವಾಗಬೇಕು’ ಎಂದು ಕರೆ ನೀಡಿದರು.

‘ಕರಾವಳಿ ಮತ್ತು ಮಲೆನಾಡಿನ ಪ್ರದೇಶ ಹೊರತುಪಡಿಸಿ ರಾಜ್ಯದಾದ್ಯಂತ ಬೆಳೆದ ಕಿರಣ್ ಕಲ್ಲಂಗಡಿ, ನಾಮಧಾರಿ, ಹಳದಿ ಬಣ್ಣದ ಕಲ್ಲಂಗಡಿ, ಬೀಜ ರಹಿತ ಕಲ್ಲಂಗಡಿ ಮತ್ತು ವಿಜಯಪುರ, ಬಾಗಲಕೋಟೆ, ಕೊಪ್ಪಳ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆೆಗಳಲ್ಲಿ ಬೆಳೆದ ಬೆಂಗಳೂರು ನೀಲಿ, ಶರದ್ ಸೀಡ್‌ಲೆಸ್, ಕೃಷ್ಣ ಶರದ್, ಥಾಮ್ಸನ್ ಸೀಡ್‌ಲೆಸ್, ಸೋನಾಕ, ತಾಜ್‌ಗಣೇಶ್, ಸೂಪರ್ ಸೋನಾಕ, ಜಂಬೂ ಶರದ್, ಆಸ್ಟ್ರೇಲಿಯಾ ರೆಡ್ ಗ್ಲೋಬ್ ಸೇರಿದಂತೆ ಸುಮಾರು 13ರಿಂದ 15 ತಳಿಯ ದ್ರಾಕ್ಷಿ ಹಣ್ಣುಗಳನ್ನು ಮೇಳದಲ್ಲಿ ನೋಡಬಹುದು. ನಗರದಲ್ಲಿರುವ 211 ಹಾಪ್‌ಕಾಮ್‌ಸ್‌ ಮಳಿಗೆಗಳಲ್ಲಿ ಶೇ 10ರಷ್ಟು ರಿಯಾಯಿತಿ ದರದಲ್ಲಿ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ’ ಎಂದು ಹಾಪ್‌ಕಾಮ್ಸ್‌ ಅಧ್ಯಕ್ಷ ದೇವರಾಜ್‌ ತಿಳಿಸಿದರು.

ADVERTISEMENT

ಶಾಸಕ ಉದಯ್ ಬಿ. ಗರುಡಾಚಾರ್, ಕೆ.ಎಚ್.ಎಫ್. ವ್ಯವಸ್ಥಾಪಕ ನಿರ್ದೇಶಕಿ ಎಚ್.ಎನ್. ಹೇಮಾ, ಹಾಪ್‌ಕಾಮ್ಸ್‌ ಮಾರುಕಟ್ಟೆ ನಿರ್ದೇಶಕ ಜಯಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.