ADVERTISEMENT

ಬೆಂಗಳೂರು | ವ್ಹೀಲಿ: 44 ಯುವಕರ ವಶ, 33 ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 15:48 IST
Last Updated 16 ಆಗಸ್ಟ್ 2024, 15:48 IST
ವ್ಹೀಲಿ ನಡೆಸುತ್ತಿದ್ದ ಯುವಕರು
ವ್ಹೀಲಿ ನಡೆಸುತ್ತಿದ್ದ ಯುವಕರು   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಚ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ವ್ಹೀಲಿ ನಡೆಸುತ್ತಿದ್ದ ಯುವಕರನ್ನು ಯಲಹಂಕ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.

ಯಲಹಂಕದ ಚಿಕ್ಕಜಾಲ ಬಳಿಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಗುರುವಾರ ಸಂಜೆ ಹಲವು ಬೈಕ್‌ಗಳಲ್ಲಿ ಯುವಕರು ವ್ಹೀಲಿ ಮಾಡುತ್ತಿದ್ದರು. ಸಾರ್ವಜನಿಕರು ಇದನ್ನು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದರು. ಈ ವೇಳೆ ಯುವಕನೊಬ್ಬ ಕೈ ತೋರಿಸಿ ಕಾರಿನಲ್ಲಿದ್ದವರಿಗೆ ಬೆದರಿಕೆ ಸಹ ಹಾಕಿದ್ದ. ಈ ದೃಶ್ಯವನ್ನು ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

‘ಬೈಕ್​ನಲ್ಲಿ ವ್ಹೀಲಿ ನಡೆಸುವ ಮೂಲಕ ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ. ಇಂತಹ ಯುವಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು, ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ADVERTISEMENT

ಉತ್ತರ ವಿಭಾಗದ ದೇವನಹಳ್ಳಿ ಸಂಚಾರ ಪೊಲೀಸ್​ ಠಾಣೆಯಲ್ಲಿ ಒಂಬತ್ತು, ಯಲಹಂಕ​ ಠಾಣೆಯಲ್ಲಿ ಆರು ಮತ್ತು ಹೆಬ್ಬಾಳ ಠಾಣೆಯಲ್ಲಿ 18 ಪ್ರಕರಣಗಳು ದಾಖಲಾಗಿವೆ. ವ್ಹೀಲಿ ನಡೆಸುತ್ತಿದ್ದ 36 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆರು ಪ್ರಕರಣಗಳಲ್ಲಿ ಬಾಲಕರು ಭಾಗಿಯಾಗಿದ್ದು, ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆರೋಪಿಗಳ ಚಾಲನಾ ಪರವಾನಗಿ (ಡಿ.ಎಲ್) ಅಮಾನತುಗೊಳಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.