ADVERTISEMENT

ಪ್ರಿಯಕರನ ಜೊತೆ ಸೇರಿ ಪತಿ ಕೊಂದ ಪತ್ನಿ

ಕಲ್ಲು ಎತ್ತಿ ಹಾಕಿ ಕೊಲೆ; ಅನೈತಿಕ ಸಂಬಂಧ ಕಾರಣ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 19:56 IST
Last Updated 24 ಜೂನ್ 2019, 19:56 IST

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪತಿಯನ್ನು ಕೊಲೆ ಮಾಡಿದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

ಶಾಂತಿ (29) ಮತ್ತು ಪಕ್ಕದ ಮನೆನಿವಾಸಿ ಕಹೀಮುದ್ದೀನ್‌ (19) ಬಂಧಿತರು. ಇದೇ 22ರಂದು ಬೆಳಿಗ್ಗೆ 6.30ರ ಸುಮಾರಿಗೆ ಈ ಕೊಲೆ ನಡೆದಿತ್ತು.

ಚಿಕ್ಕ ಬೇಗೂರಿನ ತನ್ನ ಮನೆಗೆ ಪ್ರಿಯಕರ ಕಹೀಮುದ್ದೀನ್‌ನನ್ನು ಕರೆಸಿಕೊಂಡಿದ್ದ ಶಾಂತಿ, ತಾನು ಮನೆಯಿಂದ ಹೊರಗೆ ಹೋಗುವಂತೆ ನಟಿಸಿ, ಮನೆಯಲ್ಲಿ ಪತಿ ಕಣ್ಣಪ್ಪ ಮಲಗಿದ್ದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡುವಂತೆ ಹೇಳಿದ್ದಳು ಎಂದು ಪೊಲೀಸರು ತಿಳಿಸಿದರು.

ADVERTISEMENT

ಅಸ್ಸಾಂ ರಾಜ್ಯದಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಕಹೀಮುದ್ದೀನ್ ಮರದ ಕೆಲಸ ಮಾಡುತ್ತಿದ್ದ. ಶಾಂತಿ ಮನೆ ಕೆಲಸ ಮಾಡುತ್ತಿದ್ದಳು. ಅಕ್ಕಪಕ್ಕದ ಮನೆಗಳಲ್ಲಿ ನೆಲೆಸಿದ್ದ ಇಬ್ಬರಿಗೂ ಪರಿಚಯವಾಗಿತ್ತು. ಬಳಿಕ ಅನೈತಿಕ ಸಂಬಂಧ ಬೆಳೆದಿತ್ತು.

ಈ ವಿಷಯ ಕಣ್ಣಪ್ಪ ಅವರಿಗೆ ಗೊತ್ತಾಗುತ್ತಿದ್ದಂತೆ ಪತಿ– ಪತ್ನಿ ಮಧ್ಯೆ ಗಲಾಟೆ ಉಂಟಾಗಿತ್ತು. ಪತಿ ಆಕ್ಷೇಪದ ಬಗ್ಗೆ ಶಾಂತಿ ತನ್ನ ಪ್ರಿಯಕರನಿಗೆ ಹೇಳಿದ್ದಳು. ಬಳಿಕ ಇಬ್ಬರೂ ಯೋಜನೆ ರೂಪಿಸಿ ಕೊಲೆ ಮಾಡಿದ್ದರು. ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.