ಬೆಂಗಳೂರು: ಯಶವಂತಪುರ ಠಾಣೆ ವ್ಯಾಪ್ತಿಯ ವಸತಿಗೃಹವೊಂದರಲ್ಲಿ ನಡೆದಿದ್ದ ಒಡಿಶಾದ ದೀಪಾ ಪದನ್ (21) ಕೊಲೆ ಪ್ರಕರಣದ ಆರೋಪಿ ಅನ್ಮೋಲ್ನನ್ನು ಆಂಧ್ರಪ್ರದೇಶದ ಅನಂತಪುರ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
‘ಒಡಿಶಾದ ಅನ್ಮೋಲ್, ಜೂನ್ 9ರಂದು ದೀಪಾ ಅವರನ್ನು ಕೊಂದು ಪರಾರಿಯಾಗಿದ್ದ. ರೈಲು ಮೂಲಕ ಆತ ತಮ್ಮೂರಿಗೆ ಹೊರಟಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿ, ಅನಂತಪುರ ನಿಲ್ದಾಣದಲ್ಲಿ ಈತನನ್ನು ಬಂಧಿಸಿ ನಗರಕ್ಕೆ ಕರೆತರಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಪತ್ನಿ ಸ್ನೇಹಿತೆ ಜೊತೆ ಸಲುಗೆ: ‘ಚಪ್ಪಲಿ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಅನ್ಮೋಲ್, ಒಡಿಶಾದ ಯುವತಿಯನ್ನು ಎರಡು ವರ್ಷಗಳ ಹಿಂದೆ ಮದುವೆಯಾಗಿ ಎಚ್ಎಎಲ್ ಬಳಿ ವಾಸವಿದ್ದ. ಪತ್ನಿಯ ಕಾಲೇಜು ಸ್ನೇಹಿತೆಯಾಗಿದ್ದ ದೀಪಾ ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ಇದೇ ವೇಳೆ ಅವರನ್ನು ಆರೋಪಿ ಪರಿಚಯ ಮಾಡಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.
‘ದೀಪಾ ಜೊತೆ ಸಲುಗೆ ಇಟ್ಟುಕೊಂಡಿದ್ದ ಆರೋಪಿ, ಪತ್ನಿಗೆ ಗೊತ್ತಾಗದಂತೆ ಅವರ ಜೊತೆ ಸುತ್ತಾಡುತ್ತಿದ್ದ. ಇಬ್ಬರೂ ಹಲವೆಡೆ ಪ್ರವಾಸಕ್ಕೂ ಹೋಗಿ ಬಂದಿದ್ದರು’ ಎಂದೂ ಹೇಳಿದರು.
ದೂರ ಮಾಡಿದ್ದಕ್ಕೆ ಕೊಲೆ: ‘ಆರೋಪಿಯಿಂದ ಅಂತರ ಕಾಯ್ದುಕೊಂಡಿದ್ದ ದೀಪಾ, ಕೆಲ ದಿನಗಳಿಂದ ಮೊಬೈಲ್ ಕರೆ ಹಾಗೂ ಸಂದೇಶಗಳಿಗೆ ಸ್ಪಂದಿಸುತ್ತಿರಲಿಲ್ಲ. ಇದರಿಂದ ಸಿಟ್ಟಾದ ಆರೋಪಿ, ದೀಪಾ ಅವರನ್ನು ಜೂನ್ 9ರಂದು ಯಶವಂತಪುರ ಬಳಿಯ ವಸತಿಗೃಹದ ಕೊಠಡಿಗೆ ಕರೆಸಿಕೊಂಡಿದ್ದ. ಅಲ್ಲಿಯೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.