ಬೆಂಗಳೂರು: ಬೆಲೆಬಾಳುವ ಸೀರೆಗಳನ್ನು ಪಡೆದುಕೊಂಡು ಹಣ ನೀಡದೆ ವಂಚಿಸಿದ್ದ ಆರೋಪದಡಿ ಶಶಿಕಲಾ ಎಂಬುವರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
‘ಆರೋಪಿ ಶಶಿಕಲಾ, ನ್ಯಾಯಾಧೀಶರೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದರೆಂದು ಗೊತ್ತಾಗಿದೆ. ವಂಚನೆ ಸಂಬಂಧ ಪೆಂಡಮ್ ಎಂಬುವರು ದೂರು ನೀಡಿದ್ದರು. ಅದರನ್ವಯ ಆರೋಪಿ ಶಶಿಕಲಾ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ನ್ಯಾಯಾಧೀಶರ ಮನೆಯಲ್ಲಿ ಮದುವೆ ಇರುವುದಾಗಿ ಹೇಳಿದ್ದ ಆರೋಪಿ, ₹ 3 ಲಕ್ಷ ಮೌಲ್ಯದ 264 ಸೀರೆಗಳನ್ನು ತರಿಸಿಕೊಂಡಿದ್ದರು. ಅಪಾರ್ಟ್ಮೆಂಟ್ ಸಮುಚ್ಚಯವೊಂದರ ಫ್ಲ್ಯಾಟ್ನಲ್ಲಿ ಇಟ್ಟುಕೊಂಡಿದ್ದರು. ಸೀರೆಗಳನ್ನು ನ್ಯಾಯಾಧೀಶರಿಗೆ ತೋರಿಸಿ, ನಂತರವೇ ಹಣ ಪಾವತಿ ಮಾಡುವುದಾಗಿ ಆರೋಪಿ ಹೇಳಿದ್ದರು. ಈ ಸಂಗತಿ ದೂರಿನಲ್ಲಿತ್ತು’ ಎಂದೂ ತಿಳಿಸಿದರು.
’ಹಲವು ದಿನವಾದರೂ ಆರೋಪಿ ಹಣ ನೀಡಿರಲಿಲ್ಲ. ಸೀರೆಗಳನ್ನೂ ವಾಪಸು ಕೊಟ್ಟಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ನ್ಯಾಯಾಧೀಶರ ಹೆಸರಿನಲ್ಲಿ ಆರೋಪಿ ಸೀರೆ ಖರೀದಿಸಿ ವಂಚಿಸಿರುವುದು ಗೊತ್ತಾಗಿತ್ತು. ಬಳಿಕ ಪೆಂಡಮ್ ಅವರು ಠಾಣೆಗೆ ದೂರು ನೀಡಿದ್ದರು’ ಎಂದೂ ಪೊಲೀಸರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.