ADVERTISEMENT

ಸಲುಗೆ ನಿರಾಕರಿಸಿದ್ದಕ್ಕೆ ಮಹಿಳೆ ಕೊಲೆ: ಸಂಬಂಧಿ ಬಂಧನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 14:42 IST
Last Updated 11 ಡಿಸೆಂಬರ್ 2023, 14:42 IST
   

ಬೆಂಗಳೂರು: ತನ್ನ ಜೊತೆ ಸಲುಗೆಯಿಂದ ಇರಲು ಒಪ್ಪಲಿಲ್ಲವೆಂಬ ಕಾರಣಕ್ಕೆ ಪರ್ವೀನ್ (33) ಅವರನ್ನು ಕೊಲೆ ಮಾಡಿದ್ದ ಆರೋಪದಡಿ ಸಂಬಂಧಿ ಮೊಹಮ್ಮದ್ ಜುನೈದ್ (26) ಅವರನ್ನು ಜಗಜೀವನ್‌ರಾಮ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ಪರ್ವೀನ್ ಅವರನ್ನು ಭಾನುವಾರ (ಡಿ. 10) ಸಂಜೆ ಕೊಲೆ ಮಾಡಲಾಗಿತ್ತು. ಕೃತ್ಯದ ನಂತರ ಪರಾರಿಯಾಗಿದ್ದ ಜುನೈದ್‌ನನ್ನು ಸೋಮವಾರ ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪತ್ನಿಯಿಂದ ದೂರವಾಗಿದ್ದ ಆರೋಪಿ: ‘ವಿವಾಹಿತನಾದ ಜುನೈದ್, ಪತ್ನಿ ಜೊತೆ ಜಗಳ ಮಾಡುತ್ತಿದ್ದ. ಇವರಿಬ್ಬರ ಜಗಳ ಠಾಣೆ ಮೆಟ್ಟಿಲೇರಿತ್ತು. ಪೊಲೀಸರು ಇಬ್ಬರಿಗೂ ಬುದ್ದಿವಾದ ಹೇಳಿದ್ದರು. ನಂತರ, ಪತ್ನಿಯಿಂದ ಜುನೈದ್ ದೂರವಾಗಿದ್ದ. ಸಂಬಂಧಿಯಾಗಿದ್ದ ಪರ್ವೀನ್ ಜೊತೆ ಮಾತನಾಡಲಾರಂಭಿಸಿದ್ದ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ವಿವಾಹಿತರಾಗಿದ್ದ ಪರ್ವೀನ್, ಸಂಬಂಧಿ ಎಂಬ ಕಾರಣಕ್ಕೆ ಮಾತನಾಡುತ್ತಿದ್ದರು. ಅದನ್ನೇ ದುರುಪಯೋಗಪಡಿಸಿಕೊಂಡಿದ್ದ ಜುನೈದ್, ತನ್ನೊಂದಿಗೆ ಸಲುಗೆಯಿಂದ ಇರುವಂತೆ ಒತ್ತಾಯಿಸಲಾರಂಭಿಸಿದ್ದ. ಅದನ್ನು ನಿರಾಕರಿಸಿದ್ದ ಪರ್ವೀನ್, ಆತನ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದರು’ ಎಂದು ಮೂಲಗಳು ಹೇಳಿವೆ.

‘ಸಿಟ್ಟಾಗಿದ್ದ ಆರೋಪಿ, ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಪರ್ವಿನ್ ಅವರನ್ನು ಕೊಂದಿದ್ದ. ಮೃತದೇಹ ನೋಡಿದ್ದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ವಿಶೇಷ ತಂಡ ರಚಿಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.