ಬೆಂಗಳೂರು: ಮಹಿಳೆಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ವಿರುದ್ಧದಾಖಲಾಗಿರುವಎಫ್ಐಆರ್ರದ್ದುಪಡಿಸಲು ಹೈಕೋರ್ಟ್ನಿರಾಕರಿಸಿದೆ.
‘ನನ್ನ ವಿರುದ್ಧ ಯಲಹಂಕ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಆರೋಪಿ ಶ್ರೀನಿವಾಸ ರಾಜು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.
‘ಪುಂಡು ಪೋಕರಿ ಎಂದು ಕರೆದರೆ ಅದು ಆತ್ಮಹತ್ಯೆಗೆ ಪ್ರಚೋದನೆ ಯಾಗುವುದಿಲ್ಲ' ಎಂಬ ಅರ್ಜಿದಾರರ ವಾದ ತಿರಸ್ಕರಿಸಿರುವ ನ್ಯಾಯಪೀಠ, ‘ಶಬ್ದಗಳ ಗ್ರಹಿಕೆ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಯ ನಡುವೆ ವಿಭಿನ್ನ ವಾಗಿರುತ್ತದೆ. ಕೆಲವರು ಬೈಗುಳಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ, ಸೂಕ್ಷ್ಮ ಮನಸ್ಸಿನವರು ಅದನ್ನೇ ತೀರಾ ಗಂಭೀರವಾಗಿ ತೆಗೆದು ಕೊಳ್ಳುತ್ತಾರೆ. ಆದ್ದರಿಂದ, ಈ ಹಂತದಲ್ಲಿ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿದೆ.
ಪ್ರಕರಣವೇನು?: ‘ಜಮೀನು ವಿವಾದವೊಂದಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಪತಿಯನ್ನು ಆರೋಪಿ ಶ್ರೀನಿವಾಸ ರಾಜು ಮಾಧ್ಯಮಗಳ ಮುಂದೆ ಪುಂಡು ಪೋಕರಿ ಎಂದು ನಿಂದಿಸಿದ್ದರು. ಇದರಿಂದ ಮನನೊಂದ ಮಹಿಳೆ 2012ರ ಆಗಸ್ಟ್ 16ರಂದು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.