ADVERTISEMENT

ತಡವಾಗಿ ಬಂದು ವಿಮಾನ ನಿಲ್ದಾಣ ಸ್ಫೋಟಿಸುವ ಬೆದರಿಕೆ ಹಾಕಿ ಬೇಗ ಹೋಗಲು ಯುವತಿ ಯತ್ನ!

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 8:37 IST
Last Updated 6 ಫೆಬ್ರುವರಿ 2023, 8:37 IST
   

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶುಕ್ರವಾರ ಕೊಲ್ಕತ್ತಾಗೆ ಹೊರಟಿದ್ದ ಯುವತಿಯೊಬ್ಬರು ತಪಾಸಣೆಗೆ ಮುಂದಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್‌ಎಫ್‌) ಸಿಬ್ಬಂದಿ ಮೇಲೆ ರೇಗಾಡಿ ಬಾಂಬ್‌ ಹಾಕಿ ವಿಮಾನ ನಿಲ್ದಾಣ ಸ್ಫೋಟಿಸುವ ಬೆದರಿಕೆ ಒಡ್ಡಿದ್ದರು.

ಆತುರದಿಂದ ನಿರ್ಗಮನ ದ್ವಾರ–6ಕ್ಕೆ ಬಂದ ಮಾನಸಿ ಸತೇಬೈನು (31) ಎಂಬ ಯುವತಿ ತಪಾಸಣೆಗೆ ಮುಂದಾದ ಸಿಐಎಸ್‌ಎಫ್‌ ಸಿಬ್ಬಂದಿಗೆ ಸಹಕಾರ ತೋರದೆ ಅವಸರದಿಂದ ನಿಲ್ದಾಣದ ಒಳ ಪ್ರವೇಶಿಸಲು ಯತ್ನಿಸಿದ್ದಾರೆ. ಅದಕ್ಕೆ ಅವಕಾಶ ನೀಡದ ಭದ್ರತಾ ಸಿಬ್ಬಂದ ಮೇಲೆ ರೇಗಾಡಿದ್ದಾರೆ.

ಅದಾಗಲೇ ವಿಮಾನ ಹೊರಡುವ ಸಮಯವಾದ ಕಾರಣ ಬೇಗ ಒಳ ಬಿಡುವಂತೆ ಸಿಬ್ಬಂದಿ ಮೇಲೆ ಒತ್ತಡ ಹೇರಿದರು. ತಪಾಸಣೆ ನಡೆಸಲು ಮುಂದಾದ ಭದ್ರತಾ ಸಿಬ್ಬಂದಿ ಜತೆ ವಾಗ್ವಾದಕ್ಕೆ ಇಳಿದಿದ್ದಾರೆ. ವಿಮಾನ ನಿಲ್ದಾಣವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ.

ADVERTISEMENT

ಭದ್ರತಾ ತಪಾಸಣೆಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಸಹ ಪ್ರಯಾಣಿಕರಿಗೆ ಬಳಿ ತೆರಳಿ ‘ಈ ಗೇಟ್‌ನಲ್ಲಿ ಬಾಂಬ್‌ ಇದೇ ಎಲ್ಲರೂ ಇಲ್ಲಿಂದ ಓಡಿ ಹೋಗಿ ಜೀವ ಉಳಿಸಿಕೊಳ್ಳಿ’ ಎಂದು ಕೂಗಿ ರಂಪಾಟ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಸಿಐಎಸ್‌ಎಫ್‌ ಸಿಬ್ಬಂದಿ ಸಂದೀಪ್ ಸಿಂಗ್‌ ಎಂಬುವವರ ಅಂಗಿಯ ಕಾಲರ್ ಹಿಡಿದು ಒದ್ದಿರುತ್ತಾರೆ ಹಾಗೂ ಮುಖಕ್ಕೆ ಗುದ್ದಿದ್ದಾರೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಇತರ ಪ್ರಯಾಣಿಕರು ಆತಂಕಗೊಂಡಿದ್ದರು.

ಕರ್ತವ್ಯ ನಿರ್ವಹಣೆ ಅಡ್ಡಿ ಪಡಿಸಿದ ಯುವತಿಯನ್ನು ಸಿಐಎಸ್‌ಎಫ್‌ ಸಿಬ್ಬಂದಿ ವಶಕ್ಕೆ ಪಡೆದು ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದಾರೆ. ಯುವತಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.