ಕೆಂಗೇರಿ: ಡಯಾಲಿಸಿಸ್ ಹಾಗೂ ಮೂತ್ರಪಿಂಡ ಮರುಜೋಡಣೆ ಶಸ್ತ್ರಚಿಕಿತ್ಸೆಗೆ ಒಳಗಾದವರು ಕೂಡ ಜನಸಾಮಾನ್ಯರಂತೆ ಬದುಕು ನಡೆಸಬಹುದು ಎಂದು ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆ ನೆಫ್ರಾಲಜಿ ವಿಭಾಗದ ಮುಖ್ಯಸ್ಥ ಹಾಗೂ ಮೂತ್ರಪಿಂಡ ಮರುಜೋಡಣಾ ತಜ್ಞ ಡಾ.ಅನಿಲ್ ಕುಮಾರ್ ಹೇಳಿದರು.
ವಿಶ್ವ ಮೂತ್ರಪಿಂಡ ದಿನಾಚರಣೆ ಅಂಗವಾಗಿ ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನ ಹಾಗೂ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.
ಜೀವನ ಶೈಲಿಯು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಯಮಿತ ದೈಹಿಕ ಚಟುವಟಿಕೆಗಳು, ಆಹಾರ ಕ್ರಮಗಳು ನಮ್ಮನ್ನು ರೋಗದಿಂದ ಮುಕ್ತಗೊಳಿಸುತ್ತವೆ. ಈ ನಿಟ್ಟಿನಲ್ಲಿ ಎಲ್ಲ ವಯೋಮಾನದವರು ಆಹಾರ ಹಾಗೂ ವ್ಯಾಯಾಮದ ಬಗ್ಗೆ ಆಸಕ್ತಿ ವಹಿಸುವುದು ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
‘ಶಸ್ತ್ರಚಿಕಿತ್ಸೆಗಳು ರೋಗಗಳ ತೀವ್ರತೆಯನ್ನು ಶಮನಗೊಳಿಸುತ್ತವೆ. ಇದೇ ವೇಳೆ ರೋಗಿಯ ಅಚಲ ಆತ್ಮವಿಶ್ವಾಸವು ಶಸ್ತ್ರಚಿಕಿತ್ಸೆಯ ಯಶಸ್ಸು ದೀರ್ಘ ಕಾಲ ಉಳಿಯುವಂತೆ ಮಾಡುತ್ತದೆ’ ಎಂದು ಗ್ಲೆನಿಗಲ್ಸ್ ಹಾಸ್ಪಿಟಲ್ಸ್ ಕ್ಲಸ್ಟರ್ ಸಿಒಒ ಡಾ. ಜತಿಂದರ್ ಅರೋರ ಹೇಳಿದರು.
ಯುರಾಲಜಿ ಮತ್ತು ರೀನಲ್ ಟ್ರಾನ್ಸ್ಪ್ಲಾಂಟ್ ಸರ್ಜರಿ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಸಮಾಲೋಚಕ ಡಾ.ನರೇಂದ್ರ ಎಸ್ ಮಾತನಾಡಿದರು.
ಮೂತ್ರಪಿಂಡ ಶಸ್ತ್ರಚಿಕಿತ್ಸೆಗೆ ಒಳಗಾದವರಿಗಾಗಿ ಕ್ರಿಕೆಟ್, ಲೆಮನ್ ಸ್ಪೂನ್, 100 ಮೀಟರ್ ಓಟ, ಬ್ಯಾಡ್ಮಿಂಟನ್, ಕೇರಂ ಮತ್ತು ಚೆಸ್ ಒಳಗೊಂಡಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.