ADVERTISEMENT

ಮಲೇರಿಯಾ: ಶೂನ್ಯ ಹಂತ ಸಾಧಿಸುವ ಗುರಿ

ಏ.25ರಂದು ವಿಶ್ವ ಮಲೇರಿಯಾ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 19:43 IST
Last Updated 22 ಏಪ್ರಿಲ್ 2019, 19:43 IST
   

ಬೆಂಗಳೂರು: 2022ರ ಹೊತ್ತಿಗೆ ಮಲೇರಿಯಾ ನಿರ್ಮೂಲನೆಯಲ್ಲಿ ರಾಜ್ಯವು ಶೂನ್ಯ ಹಂತವನ್ನು ಸಾಧಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರಿ ನಿಗದಿಪಡಿಸಿಕೊಂಡಿದೆ.

ಈ ಗುರಿಯನ್ನು ತಲುಪಲು ಎಲ್ಲ ಮಲೇರಿಯಾ ರಕ್ತ–ಲೇಪನಗಳನ್ನು 24 ಗಂಟೆಗಳಲ್ಲಿ ಪರೀಕ್ಷಿಸಿ, ತಕ್ಷಣ ಸಂಪೂರ್ಣ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ‘ಮಲೇರಿಯಾ ನಿವಾರಣಾ ಔಷಧಿಯನ್ನು (ಎಸಿಟಿ) ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಲಾಗಿದೆ. ಹೆಚ್ಚುವರಿ ಮಾನವ ಸಂಪನ್ಮೂಲ ಮತ್ತು ವೈದ್ಯಕೀಯ ಸಲಕರಣೆಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಲ್ಪಿಸಲಾಗಿದೆ’ ಎಂದು ಆರೋಗ್ಯ ಇಲಾಖೆಯು ಏಪ್ರಿಲ್‌ 25ರ ‘ವಿಶ್ವ ಮಲೇರಿಯಾ ದಿನ’ದ ಪ್ರಯುಕ್ತ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಬಿಎಂಪಿಯಲ್ಲೂ ತಯಾರಿ: ಮಲೇರಿಯಾ ಪ್ರಕರಣಗಳನ್ನು ಇಳಿಮುಖ ಮಾಡಲು ರಾಜ್ಯ ಸರ್ಕಾರ ರೂಪಿಸಿದ ಕ್ರಮಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡಲು ಪಾಲಿಕೆಯಲ್ಲಿನ ಮುಖ್ಯ ಆರೋಗ್ಯ ಅಧಿಕಾರಿ ಮನೋರಂಜನ್‌ ಹೆಗ್ಡೆ ಸೂಚಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಮಲೇರಿಯಾ ಹೆಚ್ಚು ಹರಡುವ ಪ್ರದೇಶಗಳಲ್ಲಿ ರೋಗ ಸರ್ವೇಕ್ಷಣ ಚಟುವಟಿಕೆಗಳನ್ನು ತೀವ್ರಗೊಳಿಸಲಾಗಿದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿ, ಕಾರ್ಯಕ್ಷಮತೆ ಹೆಚ್ಚಿಸಲಾಗಿದೆ.

ADVERTISEMENT

ಈ ರೋಗವನ್ನು ತಡೆಗಟ್ಟುವ ಬಗ್ಗೆಸಮುದಾಯದಲ್ಲಿ ಅರಿವು ಮೂಡಿಸಲು ಆರೋಗ್ಯ ಶಿಕ್ಷಣದ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಾಗೃತಿ ಅಭಿಯಾನಕ್ಕೆ ಈ ವರ್ಷದ ವಿಶ್ವ ಮಲೇರಿಯಾ ದಿನದ ಘೋಷಣೆಯಾದ ‘ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’ ಎಂದು ಘೋಷವಾಕ್ಯವನ್ನು ಬಳಸಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.