
ಶಿವಯೋಗಿ ಮೇದಾರ ಕೇತಯ್ಯ ಹಾಗೂ ಒಳಚಿತ್ರದಲ್ಲಿ ಬಸವಣ್ಣ
ಬೆಂಗಳೂರು: ಜೀವಂತ ಇರುವ ಸ್ವಾಮೀಜಿಗಳ ಭಾವಚಿತ್ರಗಳನ್ನು ಮನೆಯಲ್ಲಿ ಇಟ್ಟು ಆರಾಧಿಸುವ ಬದಲು 12ನೇ ಶತಮಾನದ ಶಿವಶರಣರ ಭಾವಚಿತ್ರಗಳನ್ನು ಇಟ್ಟು ಪೂಜಿಸಬೇಕು ಎಂದು ಮೂಡಲಗಿ ಭೋವಿ ಗುರುಪೀಠದ ಕೃಷ್ಣಪ್ಪ ಸ್ವಾಮೀಜಿ ಹೇಳಿದರು.
ಭೋವಿ ಜನಾಂಗ ಒಕ್ಕೂಟ ಭಾನುವಾರ ಆಯೋಜಿಸಿದ್ದ ಗುರು ಸಿದ್ಧರಾಮೇಶ್ವರರ 854ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮೂಢನಂಬಿಕೆಗಳು ಹಾಗೂ ವಾಮಾಚಾರ ಮಾಡುವ ಸ್ವಾಮೀಜಿಗಳನ್ನು ನಂಬಬೇಡಿ. ಪ್ರತಿಯೊಬ್ಬರೂ ಶಿವಶರಣರಂತೆ ವಿಭೂತಿ ಹಚ್ಚಬೇಕು. ಗುರು ಸಿದ್ಧರಾಮೇಶ್ವರರ ಹಾದಿಯಲ್ಲಿ ನಡೆಯಬೇಕು. ಶರಣರು ಹೇಳಿದಂತೆ ಕಾಯಕವೇ ಕೈಲಾಸ ಎಂಬಂತೆ ಜೀವನ ನಡೆಸಬೇಕು. ನಮ್ಮ ಮಕ್ಕಳಿಗೆ ನಟ–ನಟಿಯರ ಹೆಸರುಗಳನ್ನು ನಾಮಕರಣ ಮಾಡುವ ಬದಲು ಶಿವಯೋಗಿ ಸಿದ್ಧರಾಮೇಶ್ವರ ಅವರ ಹೆಸರನ್ನು ಇಡಬೇಕು’ ಎಂದು ಸಲಹೆ ನೀಡಿದರು.
‘ಧರ್ಮದ ಕಾರ್ಯಕ್ರಮಗಳು, ಜಯಂತಿ ಸೇರಿದಂತೆ ಜಾತ್ರಾ ಮಹೋತ್ಸವಗಳಿಗೆ ದೇಣಿಗೆ ನೀಡಬೇಕು. ಸರ್ಕಾರದ ಎಲ್ಲ ಸೌಲಭ್ಯಗಳನ್ನು ನಮ್ಮ ಸಮುದಾಯದವರಿಗೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಹೋರಾಟ ಮಾಡಬೇಕು. ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಕರೆ ನೀಡಿದರು.
ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಂ.ಎ. ನಂಜಪ್ಪ ಭೋವಿ, ಪ್ರಧಾನ ಕಾರ್ಯದರ್ಶಿ ಕೆ. ನಾಗರಾಜು, ಮಹಿಳಾ ಘಟಕದ ಅಧ್ಯಕ್ಷೆ ಆರತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.