ADVERTISEMENT

ಕನ್ನಡಕ್ಕೆ ಚಿದಾನಂದಮೂರ್ತಿ ಕೊಡುಗೆ ದೊಡ್ಡದು: ಸಾಹಿತಿ ಹಂಪನಾ

ಸಮಗ್ರ ಸಾಹಿತ್ಯ ಸಂಪುಟಗಳು ಹಾಗೂ ವಿವಿಧ ಮರು ಮುದ್ರಣ ಕೃತಿ ಜನಾರ್ಪಣೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 13:59 IST
Last Updated 18 ಫೆಬ್ರುವರಿ 2026, 13:59 IST
<div class="paragraphs"><p>ಕನ್ನಡ ಪುಸ್ತಕ ಪ್ರಾಧಿಕಾರವು ಹೊರ ತಂದಿರುವ ಎಂ.ಚಿದಾನಂದಮೂರ್ತಿ ಅವರ ಸಮಗ್ರ ಸಾಹಿತ್ಯ ಸಂಪುಟ ಹಾಗೂ ವಿವಿಧ ಮರು ಮುದ್ರಣ ಕೃತಿಗಳ ಜನಾರ್ಪಣೆ ಕಾರ್ಯಕ್ರಮದಲ್ಲಿ ವಿನಯ್ ಎಂ. ಚಿದಾನಂದಮೂರ್ತಿ, ಬಸವರಾಜ ಕಲ್ಲುಡಿ, ಹಂಪ ನಾಗರಾಜಯ್ಯ, ಮಾನಸ ಪಾಲ್ಗೊಂಡರು. </p></div>

ಕನ್ನಡ ಪುಸ್ತಕ ಪ್ರಾಧಿಕಾರವು ಹೊರ ತಂದಿರುವ ಎಂ.ಚಿದಾನಂದಮೂರ್ತಿ ಅವರ ಸಮಗ್ರ ಸಾಹಿತ್ಯ ಸಂಪುಟ ಹಾಗೂ ವಿವಿಧ ಮರು ಮುದ್ರಣ ಕೃತಿಗಳ ಜನಾರ್ಪಣೆ ಕಾರ್ಯಕ್ರಮದಲ್ಲಿ ವಿನಯ್ ಎಂ. ಚಿದಾನಂದಮೂರ್ತಿ, ಬಸವರಾಜ ಕಲ್ಲುಡಿ, ಹಂಪ ನಾಗರಾಜಯ್ಯ, ಮಾನಸ ಪಾಲ್ಗೊಂಡರು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪ್ರಜ್ಞೆ ಹಾಗೂ ಪ್ರತಿಭೆಯೊಂದಿಗೆ ಕನ್ನಡದಲ್ಲಿ ಸಂಶೋಧನೆ ಹಾಗೂ ಹೋರಾಟದ ವಿಷಯದಲ್ಲಿ ಮುಂಚೂಣಿಯಲ್ಲಿದ್ದ ಚಿದಾನಂದಮೂರ್ತಿ ಅವರು ನಾಡು, ನುಡಿಗೆ ತಮ್ಮನ್ನು ಸಮರ್ಪಿಸಿಕೊಂಡು ನೀಡಿದ ಕೊಡುಗೆ ದೊಡ್ಡದು’ ಎಂದು ಸಾಹಿತಿ ಹಂಪನಾ ಹೇಳಿದರು.

ADVERTISEMENT

ಕನ್ನಡ ಪುಸ್ತಕ ಪ್ರಾಧಿಕಾರವು ಬುಧವಾರ ಆಯೋಜಿಸಿದ್ದ ಎಂ. ಚಿದಾನಂದಮೂರ್ತಿ ಅವರ ಸಮಗ್ರ ಸಾಹಿತ್ಯ ಸಂಪುಟಗಳು ಹಾಗೂ ವಿವಿಧ ಮರು ಮುದ್ರಣ ಕೃತಿಗಳನ್ನು ಜನಾರ್ಪಣೆಗೊಳಿಸಿ ಮಾತನಾಡಿದರು.

‘ಲೇಖಕನಾದವನಿಗೆ ಸ್ಕೃತಿ, ಮತಿ, ಬುದ್ದಿ ಹಾಗೂ ಪ್ರಜ್ಞೆ ಬಹು ಮುಖ್ಯ. ಈ ನಾಲ್ಕು ಚಿದಾನಂದಮೂರ್ತಿ ಅವರಲ್ಲಿದ್ದವು. ಅವರೊಂದಿಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವಾಗ ಹತ್ತಿರದಿಂದ ನೋಡಿದ್ದೇನೆ. ಸಾಹಿತ್ಯ, ಸಂಶೋಧನೆ, ಹೋರಾಟದಲ್ಲೂ ಮುಂಚೂಣಿಯಲ್ಲಿದ್ದ ಅವರು ಒಂದೊಂದು ವಿಷಯವನ್ನೂ ತಲಸ್ಪರ್ಶಿಯಾಗಿ ಅಧ್ಯಯನ ಮಾಡುತ್ತಿದ್ದರು’ ಎಂದು ಹೇಳಿದರು.

ಸಂಪುಟಗಳ ಸಂಪಾದಕರಾದ ಬಸವರಾಜ ಕಲ್ಗುಡಿ ಮಾತನಾಡಿ, ‘ಕರ್ನಾಟಕದಲ್ಲಿ ಚಿದಾನಂದಮೂರ್ತಿ ಹಾಗೂ ಎಂ.ಎಂ.ಕಲಬುರಗಿ ಅವರು ಸಂಶೋಧನೆ, ಕ್ಷೇತ್ರ ಕಾರ್ಯ, ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದ್ದ ರೀತಿ ಮಾದರಿ ಎನ್ನುವಂತೆಯೇ ಇತ್ತು. ಮೂರ್ತಿ ಅವರಂತೂ ಕನ್ನಡಕ್ಕಾಗಿ ಹೋರಾಟಕ್ಕಿಳಿದ ಪರಿ ಮರೆಯಲಾಗದು. ಅವರ ಪ್ರಯತ್ನದಿಂದಲೇ ಬೆಂಗಳೂರಿನ ಚರ್ಚ್‌ಗಳಲ್ಲಿ ತಮಿಳು ಪ್ರಾರ್ಥನೆ ತಪ್ಪಿ ಕನ್ನಡಕ್ಕೆ ಅವಕಾಶ ಸಿಕ್ಕಿತು. ಮನಸು ಮಾಡಿದ್ದರೆ ಯಾವುದೇ ಹುದ್ದೆ ಪಡೆಯಲು ಅವಕಾಶ ಇದ್ದ ಅವರು ಅದರ ಹಿಂದೆ ಹೋಗಲೇ ಇಲ್ಲ’ ಎಂದು ಹೇಳಿದರು.

‘ಮೂರ್ತಿ ಅವರ ಕುಟುಂಬದವರು ಅವರ ಸಮಗ್ರ ಸಾಹಿತ್ಯ ಪ್ರಕಟಣೆಗೆ ಇನ್ನಿಲ್ಲದ ಸಹಕಾರ ನೀಡಿದ್ದರಿಂದ ಇದು ಸಾಧ್ಯವಾಗಿದೆ. ಆದರೆ, ಬೇಂದ್ರೆ ಅವರಂತಹ ಶ್ರೇಷ್ಟ ಕವಿಯ ಸಮಗ್ರ ಸಂಪುಟಗಳನ್ನು ಕೆಲವರ ಹುನ್ನಾರದಿಂದ ಈಗಲೂ ತರಲು ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮಗ ವಿನಯ್ ಚಿದಾನಂದಮೂರ್ತಿ ಮಾತನಾಡಿ, ‘ನಾಡು-ನುಡಿಯ ವಿಷಯ ಬಂದಾಗ ನಮ್ಮ ತಂದೆ ಯಾವುದಕ್ಕೂ ಹೆದರುತ್ತಿರಲಿಲ್ಲ. ಅವರಿಗೆ ಜೀವ ಬೆದರಿಕೆ ಬಂದಾಗಲೂ ಪ್ರಾಣ ಭಯ ತೊರೆದು ಕನ್ನಡ ನೆಲ,ಜಲ, ಭಾಷೆಗಾಗಿ ಹೋರಾಡಿದರು’ ಎಂದು ನೆನಪಿಸಿಕೊಂಡರು.

ಪ್ರಾಧಿಕಾರದ ಅಧ್ಯಕ್ಷ ಮಾನಸ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಶ್ರೀನಿವಾಸ ಹಾವನೂರ ಅವರ ಪುತ್ರಿ ನಿವೇದಿತ ಹೊನ್ನತ್ತಿ, ಟಿ.ಎಸ್. ವೆಂಕಣ್ಣಯ್ಯ ಅವರ ಮಗ ಟಿ.ವಿ.ಶ್ರೀಕಂಠಯ್ಯ, ಸಂಪುಟ ತರಲು ಸಹಕರಿಸಿದ ಟಿ. ಮಂಜುನಾಥ ಅವರನ್ನು ಸನ್ಮಾನಿಸಲಾಯಿತು. ಲೇಖಕ ಡಾ.ಸಿ.ಆರ್.ಚಂದ್ರಶೇಖರ್‌, ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್, ಸದಸ್ಯರಾದ ಬಿ.ಸಿ.ಕುಶಾಲ, ಲಕ್ಷ್ಮಣ ಕೊಡಸೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.