ಬೆಂಗಳೂರು: ‘ಹೆಚ್ಚು ಶಿಕ್ಷಣ ಹೊಂದಿರದ, ಕೆಳಮಧ್ಯಮ ವರ್ಗದ ಮಹಿಳೆಯರೂ ಈಗಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಮಾದರಿಯ ಹೋರಾಟದ ಮೂಲಕ ಮುಂದೆ ವಿವಿಧ ಹಕ್ಕುಗಳನ್ನು ಪಡೆಯಬಹುದು ಎಂಬ ಅರಿವು ಅವರಲ್ಲಿ ಮೂಡಿದೆ’ ಎಂದು ಲೇಖಕಿ ಎಸ್. ಸತ್ಯಾ ಅಭಿಪ್ರಾಯಪಟ್ಟರು.
ಮಹಿಳಾ ದಿನದ ಅಂಗವಾಗಿ ‘ಹಿತೈಷಿಣಿ’ ಮಹಿಳಾ ಅಧ್ಯಯನ ಕೇಂದ್ರವು ನಗರದಲ್ಲಿ ‘ಸಮಕಾಲೀನ ಹೋರಾಟಗಳಲ್ಲಿ ಮಹಿಳೆಯರ ಪಾತ್ರ’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
‘ಈ ರೀತಿಯ ಪ್ರತಿಭಟನೆಗಳಿಗೆ ಯಾರನ್ನೂ ಒತ್ತಾಯಪೂರ್ವಕವಾಗಿ ಕರೆತರಲಾಗುತ್ತಿಲ್ಲ. ಸ್ವಪ್ರೇರಣೆಯಿಂದ ಎಲ್ಲ ವರ್ಗದ ಮಹಿಳೆಯರು ಭಾಗವಹಿಸುತ್ತಿದ್ದಾರೆ. ಮುಂದೆ, ಸ್ಥಳೀಯವಾಗಿ ವಿವಿಧ ಸೌಲಭ್ಯಗಳಿಗೆ ಆಗ್ರಹಿಸಿ ಪಾಲಿಕೆ ಸದಸ್ಯರು, ಶಾಸಕರ ವಿರುದ್ಧ ಪ್ರತಿಭಟನೆ ನಡೆಸಲು ಇಂತಹ ಹೋರಾಟ ಪ್ರೇರಣೆಯಾಗಲಿದೆ’ ಎಂದರು.
ಹಿರಿಯ ಲೇಖಕಿ ಡಾ. ವಿಜಯಾ, ‘ಯಾವುದೇ ವಿಷಯದಲ್ಲಿ ಕೆಲವರು ಮಾತ್ರ ಹೋರಾಟ ಮಾಡುತ್ತಾರೆ. ಕೆಲವರು ಮನೆಯಲ್ಲಿ ಕುಳಿತು ಹೋರಾಟದ ಫಲ ಉಣ್ಣುತ್ತಾರೆ. ಎಲ್ಲರೂ ಪಾಲ್ಗೊಂಡರೆ ಹೋರಾಟ ಬೇಗ ಫಲ ನೀಡುತ್ತದೆ’ ಎಂದರು.
ಹಿರಿಯ ರಂಗಕರ್ಮಿ ಪ್ರೊ. ರಾಮೇಶ್ವರಿ ವರ್ಮ, ‘ನಿತ್ಯ ಎಷ್ಟೋ ವಿಷಯಗಳಿಗೆ ಹೋರಾಟ, ಪ್ರತಿಭಟನೆ ನಡೆಯುತ್ತಿರುತ್ತವೆ. ಆದರೆ, ಅವು ಗುರಿ ತಲುಪಿದರೆ ಮಾತ್ರ ಸಾರ್ಥಕ ಆಗುತ್ತದೆ’ ಎಂದರು.
ನಿರ್ದೇಶಕ ಬಿ. ಸುರೇಶ, ‘ಹೋರಾಟ, ಪ್ರತಿಭಟನೆಗಳಿಂದಲೇ ಪ್ರಭಾಪ್ರಭುತ್ವ ಗಟ್ಟಿಗೊಳ್ಳುತ್ತದೆ’ ಎಂದರು.
ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರದ ಸಂಚಾಲಕಿಯರಾದ ಆರ್. ಪೂರ್ಣಿಮಾ, ಎನ್. ಗಾಯತ್ರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.