ಯಲಹಂಕ: ಬೆಂಗಳೂರು ಮಹಾನಗರ ಜಾತ್ಯತೀತ ಜನತಾದಳ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಮೆಡ್ ಸ್ಟಾರ್ ಆಸ್ಪತ್ರೆಯ ಸಹಯೋಗದಲ್ಲಿ ಹೆಗಡೆನಗರದ ಎಂ.ಸಿ.ಇ.ಸಿ.ಎಚ್.ಎಸ್ ಬಡಾವಣೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್, ‘ಮೂರು ವರ್ಷಗಳಿಂದ ಕೋವಿಡ್ನಿಂದ ಎಲ್ಲರ ಮನಸ್ಸು ಮತ್ತು ದೇಹ ಜರ್ಜರಿತ ವಾಗಿದೆ. ಬಡಜನರು ಸಂಕಷ್ಟ ಪರಿಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ ಆರೋಗ್ಯಸೇವೆ ಒದಗಿಸುವ ಕಾರ್ಯಕ್ಕೆ ಒತ್ತುನೀಡಿ, ಇಂತಹ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ’ ಎಂದರು.
ಬ್ಯಾಟರಾಯನಪುರ ಕ್ಷೇತ್ರದ ಜೆಡಿಎಸ್ ಘಟಕದ ಅಧ್ಯಕ್ಷ ಎನ್.ವೇಣುಗೋಪಾಲ್ ಮಾತನಾಡಿ, ‘ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡಜನರು ಮತ್ತು ಕೂಲಿಕಾರ್ಮಿಕರು ವಾಸಿಸುತ್ತಿದ್ದು, ಆರೋಗ್ಯ ಸಮಸ್ಯೆಗಳು ತಲೆದೋರಿದರೆ ಹಣ ತೆತ್ತು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಇವರಿಂದ ಸಾಧ್ಯವಿಲ್ಲ. ಈ ದಿಸೆಯಲ್ಲಿ ಉಚಿತವಾಗಿ ಆರೋಗ್ಯಶಿಬಿರ ಏರ್ಪಡಿಸಲಾಗಿದೆ’ ಎಂದರು.
300 ಜನರು ಶಿಬಿರದ ಪ್ರಯೋಜನ ಪಡೆದರು. ಕಿಮ್ಸ್ ಆಸ್ಪತ್ರೆಯ ನಿವೃತ್ತ ವೈದ್ಯಕೀಯ ಪ್ರಾಧ್ಯಾಪಕ ಡಾ.ಚಿಕ್ಕಲಿಂಗಯ್ಯ, ಮುಖಂಡರಾದ ಟಿ.ಎನ್.ಹರೀಶ್ ಕುಮಾರ್, ಆಂಜನೇಗೌಡ, ಗೋವಿಂದೇಗೌಡ, ದಾ.ಕೃ.ದೇವರಾಜ್, ಎಂ.ಖಲೀಲುಲ್ಲ, ಅಂಬಿಕಾ ಮಣಿ, ವಿ.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.