ADVERTISEMENT

ಯಡಿಯೂರಪ್ಪ ನನ್ನನ್ನು ಶತ್ರು ಎಂದುಕೊಂಡಿದ್ದಾರೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ಮೀಸಲಾತಿಗಾಗಿ ಪಂಚಮಸಾಲಿ ಲಿಂಗಾಯತರ ಧರಣಿ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 20:54 IST
Last Updated 1 ಮಾರ್ಚ್ 2021, 20:54 IST
ನಗರದಲ್ಲಿ ಸೋಮವಾರ ಬಸನಗೌಡ ಪಾಟೀಲ ಯತ್ನಾಳ ಪತ್ರ ಚಳವಳಿಗೆ ಚಾಲನೆ ನೀಡಿದರು. ಬಸವಜಯ ಮೃತ್ಯುಂಜಯ ಸ್ವಾಮೀಜಿ, ವಿಜಯಾನಂದ ಕಾಶಪ್ಪನವರ ಇದ್ದಾರೆ
ನಗರದಲ್ಲಿ ಸೋಮವಾರ ಬಸನಗೌಡ ಪಾಟೀಲ ಯತ್ನಾಳ ಪತ್ರ ಚಳವಳಿಗೆ ಚಾಲನೆ ನೀಡಿದರು. ಬಸವಜಯ ಮೃತ್ಯುಂಜಯ ಸ್ವಾಮೀಜಿ, ವಿಜಯಾನಂದ ಕಾಶಪ್ಪನವರ ಇದ್ದಾರೆ   

ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನನ್ನನ್ನು ಅವರ ಶತ್ರು ಎಂದುಕೊಂಡಿದ್ದಾರೆ. ಅವರಿಗೆ ಪೈಪೋಟಿ ನೀಡುತ್ತಿದ್ದೇನೆ ಎಂದು ಭಾವಿಸಿದ್ದಾರೆ. ಆದರೆ, ನಮ್ಮ ಹೋರಾಟ ಸರ್ಕಾರದ ವಿರುದ್ಧ ಅಲ್ಲ. ಪೊಲೀಸರ ವಿರುದ್ಧವೂ ಅಲ್ಲ. ಮೀಸಲಾತಿಗಾಗಿ ಮಾತ್ರ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಪಂಚಮಸಾಲಿ ಸಮುದಾಯವನ್ನು 2ಎ ಪ್ರವರ್ಗಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಬೇರೆ ಕಾರ್ಯ ನಿಮಿತ್ತ ನಾನು ದೆಹಲಿಗೆ ಹೋದರೆ ಹೈಕಮಾಂಡ್‌ನವರೇ ಕರೆಸಿಕೊಂಡರು ಎಂದು ಸುಮ್ಮನೆ ಸುದ್ದಿ ಮಾಡಿಸಿದರು. ಇದೆಲ್ಲ ಮಾಡುವುದು ಬಿಟ್ಟು ಮೀಸಲಾತಿ ನೀಡುತ್ತೇವೆ ಎಂದು ಸ್ವಚ್ಛ ಮನಸಿನಿಂದ ಹೇಳಿ’ ಎಂದು ಯಡಿಯೂರಪ್ಪನವರನ್ನು ಉದ್ದೇಶಿಸಿ ಹೇಳಿದರು.

‘ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ನನ್ನನ್ನು ಬಂಧಿಸಲು ಲಿಂಗಾಯತ ಐಪಿಎಸ್‌ ಅಧಿಕಾರಿಗಳನ್ನು ಕಳುಹಿಸಿದ್ದರು. ಎಷ್ಟು ದಿನ ವಿಜಯೇಂದ್ರ ಅವರ ಮಾತು ಕೇಳುತ್ತೀರಿ ಎಂದು ಹೇಳಿ ಕಳಿಸಿದೆ’ ಎಂದೂ ಹೇಳಿದರು.

ADVERTISEMENT

ಕೂಡಲಸಂಗಮ ಪೀಠದ ಪೀಠಾಧ್ಯಕ್ಷ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ‘ಮೀಸಲಾತಿಗೆ ಒತ್ತಾಯಿಸಿ ರಾಜ್ಯದಾದ್ಯಂತ ಪತ್ರ ಚಳವಳಿ ನಡೆಸಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸಮುದಾಯದ ಜನರು ಮಂಗಳವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಿದ್ದಾರೆ. ಮಾ.4ರವರೆಗೆ ಈ ಪ್ರತಿಭಟನೆ ಮುಂದುವರಿಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.