ಬೆಂಗಳೂರು: ನಗರದ ಹಲವು ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಉತ್ತರ ಪ್ರದೇಶದ ಇಬ್ಬರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
‘ಗಾಜಿಯಾಬಾದ್ನ ವಿಜಯ
ನಗರದ ಅಕ್ಬರ್ (36) ಹಾಗೂ ಶಾದಬ್ ಖಾನ್ (28) ಬಂಧಿತರು. ಇವರಿಂದ ₹ 7 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಯಲಹಂಕ ಉಪನಗರದ ನಿವಾಸಿಯೊಬ್ಬರು 2020ರ ಫೆಬ್ರುವರಿ 13ರಂದು ಸಂಜೆ 5.30 ಗಂಟೆಗೆ ಹೊರ ಹೋಗಿದ್ದಾಗ ಮನೆಯಲ್ಲಿದ್ದ 400 ಗ್ರಾಂ ಚಿನ್ನಾಭರಣ ಹಾಗೂ ₹ 2 ಲಕ್ಷ ನಗದು ಕಳ್ಳತನವಾಗಿತ್ತು.’
‘ಕಳ್ಳತನ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಆರಂಭಿಸಲಾಗಿತ್ತು. ಆದರೆ, ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ. ಆರೋಪಿ ಅಕ್ಬರ್ ಕಳ್ಳತನ ಮಾಡುವುದಕ್ಕಾಗಿ ಇತ್ತೀಚೆಗಷ್ಟೇ ನಗರಕ್ಕೆ ಬಂದಿದ್ದ. ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಯಿತು. ಆತ ನೀಡಿದ್ದ ಮಾಹಿತಿಯನ್ವಯ ಮತ್ತೊಬ್ಬ ಆರೋಪಿ ಶಾದಬ್ ಖಾನ್ನನ್ನು ಉತ್ತರಪ್ರದೇಶದಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ. ಇಬ್ಬರೂ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದೂ ತಿಳಿಸಿದರು.
ಎಂಟು ಬಾರಿ ಜೈಲು: ‘ಸುಲ್ತಾನ್ ಸೈಫಿ ಹಾಗೂ ರಜಿಯಾ ದಂಪತಿ ಮಗನೇ ಅಕ್ಬರ್. ಸುಲ್ತಾನ್ ಸೈಫಿ ಸಹ ಕಳ್ಳತನ ಮಾಡುತ್ತಿದ್ದ. ಆತ ಕದ್ದುಕೊಂಡು ಬರುತ್ತಿದ್ದ ಚಿನ್ನಾಭರಣವನ್ನು ರಜಿಯಾ ವಿಲೇವಾರಿ ಮಾಡುತ್ತಿದ್ದಳು. ಕೆಲ ವರ್ಷಗಳ ಹಿಂದೆ ದಂಪತಿ ಮೃತಪಟ್ಟಿದ್ದರು. ಐದನೇ ತರಗತಿಗೆ ಶಾಲೆ ಬಿಟ್ಟು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಅಕ್ಬರ್, 2004ರಿಂದ ಕಳ್ಳತನಕ್ಕೆ ಇಳಿದಿದ್ದ. ಕದ್ದ ವಸ್ತುಗಳನ್ನು ಮಾರಾಟ ಮಾಡಿ, ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ಮಹಾರಾಷ್ಟ್ರ, ದೆಹಲಿ ಹಾಗೂ ಕರ್ನಾಟಕದ ಹಲವು ನಗರಗಳಿಗೆ ಆಗಾಗ ಸುತ್ತಾಡುತ್ತಿದ್ದ ಆರೋಪಿ, ಮನೆಗಳನ್ನು ಗುರುತಿಸಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.