ಬೆಂಗಳೂರು: ವ್ಯಕ್ತಿಯೊಬ್ಬರಿಗೆ ದುಪ್ಪಟ್ಟು ಲಾಭದ ಆಮಿಷವೊಡ್ಡಿ ₹12.59 ಲಕ್ಷ ಹಣ ವಂಚಿಸಿರುವ ಆರೋಪಿ ವಿರುದ್ಧ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಲಹಂಕ ನಿವಾಸಿಯೊಬ್ಬರು ನೀಡಿರುವ ದೂರಿನ ಆಧಾರದಲ್ಲಿ ಪ್ರಮೋದ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವಪೊಲೀಸರು ತನಿಖೆ ನಡೆಸುತ್ತಿದ್ದಾರೆ.
‘ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿರುವ ದೂರುದಾರ ವ್ಯಕ್ತಿಗೆ ಕೆಲ ವರ್ಷಗಳ ಹಿಂದೆ ಆರೋಪಿಯ ಪರಿಚಯವಾಗಿತ್ತು. ತಾನು ಟ್ರಾವೆಲ್ ಏಜೆನ್ಸಿಯೊಂದನ್ನು ನಡೆಸುತ್ತಿದ್ದು, ವಿದೇಶಿ ಹಣ ವಿನಿಮಯ, ವಿಮಾನ ಟಿಕೆಟ್ ಮಾರಾಟ ಸೇರಿದಂತೆ ವಿವಿಧ ಸ್ಕೀಂಗಳಲ್ಲಿ ಹಣ ಹೂಡಿಕೆ ಮಾಡಿ ಲಾಭ ಮಾಡುತ್ತಿದ್ದೇನೆ. ನೀವು ಅವುಗಳಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದೆಂದು ನಂಬಿಸಿದ್ದ ಆರೋಪಿಯು ವ್ಯಕ್ತಿಯಿಂದ ₹1.32 ಲಕ್ಷ ಹಣ ಪಡೆದಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಕೆಲ ದಿನಗಳ ನಂತರ ಮತ್ತೆ ದೂರುದಾರ ವ್ಯಕ್ತಿಗೆ ಕರೆ ಮಾಡಿದ್ದ ಆರೋಪಿ, ಬೇರೆ ಬೇರೆ ಸ್ಕೀಂಗಳ ಬಗ್ಗೆ ಮಾಹಿತಿ ನೀಡಿ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದ. ಹೀಗೆ ಹಂತ ಹಂತವಾಗಿ₹12.59 ಲಕ್ಷ ಹಣ ಪಡೆದಿದ್ದ. ಅಷ್ಟೊಂದು ಮೊತ್ತ ಪಡೆದ ಬಳಿಕವೂ ಲಾಭಾಂಶ ನೀಡದ್ದರಿಂದ ಅನುಮಾನಗೊಂಡ ವ್ಯಕ್ತಿಯು ಆರೋಪಿಗೆ ಕರೆ ಮಾಡಿ ಹಣ ಹಿಂದಿರುಗಿಸುವಂತೆ ಸೂಚಿಸಿದ್ದರು. ಅದಾದ ಬಳಿಕ ಆತ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ’ ಎಂದು ಅವರು ಮಾಹಿತಿ ನೀಡಿದರು.
‘ಆರೋಪಿಯು ಇದೇ ಮಾದರಿಯಲ್ಲಿ ಹಲವರಿಗೆ ವಂಚನೆ ಮಾಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಆತ ತಲೆಮರೆಸಿಕೊಂಡಿದ್ದಾನೆ. ಇನ್ನಷ್ಟು ಮಂದಿ ಈ ಜಾಲದಲ್ಲಿ ಭಾಗಿಯಾಗಿರುವ ಅನುಮಾನವಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.