ಬೆಂಗಳೂರು: ಯಲಹಂಕ ಸಮೀಪ ಜಕ್ಕೂರು ಬಡಾವಣೆ ಶನೈಶ್ಚರಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯನ್ನು ಬಿಬಿಎಂಪಿ ತ್ಯಾಜ್ಯ ವಿಲೇವಾರಿಗುತ್ತಿಗೆದಾರರು, ತ್ಯಾಜ್ಯ ವಿಂಗಡಣಾ ಸ್ಥಳವಾಗಿ ಮಾಡಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಹರಡುತ್ತಿರುವ ದುರ್ವಾಸನೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ.
ಈ ರಸ್ತೆಯು ಬಳ್ಳಾರಿ ಮುಖ್ಯರಸ್ತೆ, ಜಿಕೆವಿಕೆ ಕ್ರಾಸ್ನಿಂದ ಜಕ್ಕೂರು ಬಡಾವಣೆ, ಜಕ್ಕೂರು, ಶ್ರೀರಾಮಪುರ, ಸಂಪಿಗೆಹಳ್ಳಿ, ಅಗ್ರಹಾರ, ಚೊಕ್ಕನಹಳ್ಳಿ ಸೇರಿದಂತೆ ಹಲವಾರು ಬಡಾವಣೆಗಳಿಗೆ ಹಾಗೂ ಹೆಗಡೆ ನಗರ ಮೂಲಕ ಕೆ.ಆರ್. ಪುರ ಮತ್ತು ಹೊಸಕೋಟೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜೋಡಿ ರಸ್ತೆಯಾಗಿದೆ. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.
ಟಿಪ್ಪರ್ ಮೂಲಕ ತ್ಯಾಜ್ಯವನ್ನು ತಂದು ಈ ಸ್ಥಳದಲ್ಲಿ ವಿಂಗಡಣೆ ಮಾಡಿ, ತ್ಯಾಜ್ಯವಿಲೇವಾರಿ ಘಟಕಕ್ಕೆ ರವಾನಿಸಲಾಗುತ್ತಿದೆ. ತ್ಯಾಜ್ಯ ತುಂಬಿದ ವಾಹನಗಳನ್ನು ರಸ್ತೆಯಲ್ಲಿ ನಿಲುಗಡೆ ಮಾಡುವುದರಿಂದ ವಾಹನದಿಂದ ಸುರಿಯುವ ತ್ಯಾಜ್ಯದ ಕೊಳಚೆ ರಸ್ತೆಯುದ್ದಕ್ಕೂ ಹರಿಯುತ್ತಿದೆ. ಮಳೆ ಬಂದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಸಾರ್ವಜನಿಕರು ಈ ಪ್ರದೇಶದಲ್ಲಿ ಮೂಗು ಮುಚ್ಚಿಕೊಂಡು ಸಂಚರಿಸಬೇಕಾಗಿದೆ ಎಂದು ನವ್ಯನಗರ ನಿವಾಸಿ ಕುಮಾರ್ ದೂರಿದರು.
ಮಳೆ ಬಂದ ಸಂದರ್ಭದಲ್ಲಿ ಸಮಸ್ಯೆಯಾಗುತ್ತಿದ್ದು, ಕಸವಿಂಗಡಣೆ ಮಾಡಲು ಬಿಬಿಎಂಪಿ ಬೇರೆ ಜಾಗ ನೀಡಿದರೆ ಕೂಡಲೇ ಸ್ಥಳಾಂತರಿಸಲಾ
ಗುವುದು ಎಂದು ತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ಪ್ರಭಾಕರ್ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.