ಯಲಹಂಕ: ದೊಡ್ಡಬಳ್ಳಾಪುರಮುಖ್ಯರಸ್ತೆಯ ಬೆಂಗಳೂರು ಜಲ ಮಂಡಳಿ ಕಚೇರಿಯ ಮುಂಭಾಗದಲ್ಲಿ ನಿರುಪಯುಕ್ತ ಹಳೆಯ ಕಾರುಗಳನ್ನು ಅಲಂಕೃತಗೊಳಿಸಿ, ಒಂದರ ಮೇಲೊಂದರಂತೆ ಎತ್ತರಕ್ಕೆ ನಿಲ್ಲಿಸಲಾಗಿದೆ. ಈ ಮಾದರಿಯು ಆಕರ್ಷಣೀಯವಾಗಿ ಕಾಣುವ ಮೂಲಕ ದಾರಿಹೋಕರ ಕಣ್ಮನ ಸೆಳೆಯುತ್ತಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಅನುಕೂಲವಾಗುವಂತೆ ಈ ಜಾಗದಲ್ಲಿ ಬಯಲು ರಂಗಮಂದಿರ ಸಹ ನಿರ್ಮಿಸಲಾಗಿದೆ. ಎನ್.ಇ.ಎಸ್ ವೃತ್ತದ ಬಳಿ ಆಧುನಿಕ ರೀತಿಯಲ್ಲಿ ಪೇ ಆ್ಯಂಡ್ ಯೂಸ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಕಡಿಮೆ ದರದಲ್ಲಿ 60 ಕಾರುಗಳು ಮತ್ತು ದ್ವಿಚಕ್ರವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಅನಂತಪುರ ಗೇಟ್ವರೆಗೆ ಟಸ್ಕರ್ ವಿದ್ಯುತ್ ದೀಪ ಅಳವಡಿಸಲಾಗಿದ್ದು, ಈ ದೀಪಗಳು ಅಂದವಾದ ಬೆಳಕು ನೀಡುವುದರ ಜೊತೆಗೆ ಅಲಂಕಾರಿ ಕವಾಗಿ ಕಾಣುವ ಮೂಲಕ ಜನರ ಗಮನ ಸೆಳೆಯುತ್ತಿವೆ. ಅಟ್ಟೂರು ಕೆರೆ ಯಲ್ಲಿ 2 ಕಿ.ಮೀ ನಡಿಗೆಪಥ, ವಿದ್ಯುತ್ ದೀಪ ಮತ್ತು ಎಫ್.ಎಂ.ರೇಡಿಯೊ ಹಾಗೂ ಸಂದೀಪ್ ಉನ್ನಿಕೃಷ್ಣನ್ ರಸ್ತೆ ಯಲ್ಲಿ ಮರಗಳಿಗೆ ಅಳವಡಿಸಿರುವ ಶೇಡ್ ವಿದ್ಯುತ್ ದೀಪಗಳನ್ನು ಉದ್ಘಾಟಿಸಲಾಯಿತು. ಕೋಗಿಲು ವೃತ್ತದಲ್ಲಿ ‘ಮೇಕ್-ಇನ್-ಇಂಡಿಯಾ’ ಪರಿಕಲ್ಪನೆಯಡಿ ನಿರ್ಮಿಸಿರುವ ಅಲಂಕಾರಿಕ ಎತ್ತಿನ ಬಂಡಿಯ ಪ್ರತಿಕೃತಿಯನ್ನು ಅನಾವರಣಗೊಳಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕ ಎಸ್.ಆರ್.ವಿಶ್ವನಾಥ್, ‘₹8.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಎಲ್ಲ ಸೌಲಭ್ಯಗಳಿಗೆ ಚಾಲನೆ ನೀಡಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.