ಬೆಂಗಳೂರು: ಹಣ್ಣು–ಹಂಪಲು, ಹೂವು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ನಡುವೆಯೂ ಯುಗಾದಿ ಹಬ್ಬದ ಪ್ರಯುಕ್ತ ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಶುಕ್ರವಾರ ವ್ಯಾಪಾರ–ವಹಿವಾಟು ಭರ್ಜರಿಯಾಗಿ ನಡೆಯಿತು.
ಹಬ್ಬದ ಮುನ್ನಾ ದಿನವೇ ಹೂವು, ಹಣ್ಣು, ಪೂಜಾ ಸಾಮಗ್ರಿಗಳನ್ನು ಖರೀದಿಸಲು ಕೆ.ಆರ್.ಮಾರುಕಟ್ಟೆಯಲ್ಲಿ ಜನರು ಮುಗಿಬಿದ್ದರು.
ದ್ರಾಕ್ಷಿ ಪ್ರತಿ ಕೆ.ಜಿ.ಗೆ ₹ 100 ಬೆಲೆ ಇದೆ. ಏಲಕ್ಕಿ ಬಾಳೆಹಣ್ಣು ಕೆ.ಜಿ.ಗೆ ₹ 60, ಸೇಬು ಕೆ.ಜಿ.ಗೆ ₹ 160, ಕಿತ್ತಳೆ ಕೆ.ಜಿ.ಗೆ ₹ 80, ದಾಳಿಂಬೆ ಕೆ.ಜಿ.ಗೆ ₹ 120 ಸೇರಿದಂತೆ ವಿವಿಧ ಹಣ್ಣುಗಳ ಬೆಲೆ ಏರಿಕೆ ಕಂಡಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಇತ್ತಗ್ರಾಹಕರು ಚೌಕಾಸಿ ಮಾಡಿ ಹಣ್ಣು, ಹೂವುಗಳನ್ನು ಖರೀದಿಸುವ ದೃಶ್ಯ ಕಂಡುಬಂತು.
ಸಾಮಾನ್ಯ ದಿನಗಳಲ್ಲಿ ಕೆ.ಜಿ.ಗೆ ₹ 250 – ₹300 ಇರುತ್ತಿದ್ದ ಮಲ್ಲಿಗೆ ಬೆಲೆ ₹ 500ಕ್ಕೆ ಏರಿಕೆಯಾಗಿತ್ತು. ಸುಗಂಧರಾಜ ಕೆ.ಜಿ.ಗೆ ₹ 180 ಮತ್ತು ಕನಕಾಂಬರ ಹೂವು ಕೆ.ಜಿ.ಗೆ ₹ 800 ಇತ್ತು. ಒಂದು ಮಾರಿಗೆಮೇರಿಗೋಲ್ಡ್ ₹ 150 ಹಾಗೂ ಚೆಂಡು ಹೂವು ₹ 50 ರಂತೆ ಮಾರಾಟ ಮಾಡಲಾಗುತ್ತಿತ್ತು. ಗುಲಾಬಿ ಹಾರಕ್ಕೆ ₹ 350 (ಚಿಕ್ಕದು) ಮತ್ತು ಮಲ್ಲಿಗೆ ಹಾರಕ್ಕೆ ₹ 150(ಚಿಕ್ಕದು) ಇತ್ತು. ಎಲ್ಲಾ ಹೂವುಗಳಿಗೂ (ಹಾರಗಳು ಸೇರಿ) ದರ ₹ 40–50 ಹೆಚ್ಚಾಗಿದೆ.
ಅಲ್ಲದೇ,ಏಲಕ್ಕಿ ಬಾಳೆಹಣ್ಣು ₹60 ಮತ್ತು ಪಚ್ಚಬಾಳೆ ₹ 30 ಮಾರಾಟವಾಗುತ್ತಿತ್ತು. ಅಲ್ಲದೇ, ಸೇಬು, ಕಿತ್ತಳೆ, ಮೋಸಂಬಿ ಸೇರಿದಂತೆ ಬಹುತೇಕ ಹಣ್ಣುಗಳ ಬೆಲೆಯೂ ಏರಿಕೆ ಕಂಡಿವೆ.
ತರಕಾರಿಯಲ್ಲಿ ಬೀನ್ಸ್ ದರ ಏರಿಕೆ ಕಂಡಿರುವುದರಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇದಲ್ಲದೆ ಕೆಲವೇ ತರಕಾರಿಗಳ ಬೆಲೆ ತುಸು ಏರಿಕೆಯಾಗಿದೆ. ಆಲೂಗಡ್ಡೆ ಕೆ.ಜಿ.ಗೆ ₹20, ಬೆಂಡೆಕಾಯಿ ಕೆ.ಜಿ.ಗೆ ₹30, ಮೂಲಂಗಿ ಕೆ.ಜಿ.ಗೆ ₹ 30, ಬೀಟ್ರೂಟ್ ಬೆಲೆ ಕೆ.ಜಿ.ಗೆ ₹ 30–₹40 ಇದೆ. ಟೊಮೆಟೊ ಕೆ.ಜಿ.ಗೆ ₹ 15–20, ಈರುಳ್ಳಿ ₹ 15 ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.