ADVERTISEMENT

ಮುಂಬೈನ ವಸತಿ ಸಂಕೀರ್ಣಕ್ಕೆ ಜಮೀರ್ ಭೇಟಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 15:59 IST
Last Updated 6 ಆಗಸ್ಟ್ 2023, 15:59 IST
ವಸತಿ ಸಂಕೀರ್ಣದ ಬಗ್ಗೆ ಜಮೀರ್ ಅಹಮದ್ ಖಾನ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು
ವಸತಿ ಸಂಕೀರ್ಣದ ಬಗ್ಗೆ ಜಮೀರ್ ಅಹಮದ್ ಖಾನ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು   

ಬೆಂಗಳೂರು: ಮುಂಬೈ ಕೊಳೆಗೇರಿ ಪುನರ್ ವಸತಿ ಪ್ರಾಧಿಕಾರವು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಿಸುತ್ತಿರುವ ವಸತಿ ಸಂಕೀರ್ಣವನ್ನು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ವೀಕ್ಷಿಸಿದರು.

ಮುಂಬೈನ ಅಂಧೇರಿ ಈಸ್ಟ್‌ನಲ್ಲಿರುವ ಸಾಯಿಬಾಬಾ ನಗರದ ಟೀಚರ್ಸ್ ಕಾಲೊನಿಯಲ್ಲಿ ಈ ವಸತಿ ಸಂಕಿರ್ಣ ನಿರ್ಮಾಣವಾಗುತ್ತಿದೆ. ಅಲ್ಲಿನ ಅಧಿಕಾರಿಗಳ ಜತೆಗೆ ಯೋಜನೆಯ ಬಗ್ಗೆ ಜಮೀರ್ ಮಾಹಿತಿ ‍ಪಡೆದುಕೊಂರು. 

ಮುಂಬೈ ಕೊಳೆಗೇರಿ ಪುನರ್ ವಸತಿ ಪ್ರಾಧಿಕಾರದಿಂದ ಕೊಳೆಗೇರಿ ನಿವಾಸಿಗಳ ಸಹಕಾರ ಸಂಘ ಸ್ಥಾಪಿಸಿ ಗುತ್ತಿಗೆ ಆಧಾರದಲ್ಲಿ ಒಪ್ಪಂದ ಮಾಡಿಕೊಂಡು, ವಸತಿ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಶೇ 50ರಷ್ಟು ಜಾಗವನ್ನು ಗುತ್ತಿಗೆ ಸಂಸ್ಥೆಗೆ ನೀಡಲಾಗುತ್ತದೆ. ಫಲಾನುಭವಿಗಳಿಗೆ ಬ್ಯಾಂಕ್ ಸಾಲದ ವ್ಯವಸ್ಥೆ ಬೇಕಿದ್ದರು ಗುತ್ತಿಗೆ ಸಂಸ್ಥೆಯೇ ನೆರವಾಗಲಿದೆ. ವಸತಿ ಸಂಕೀರ್ಣ ನಿರ್ಮಾಣದವರೆಗೆ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಿದ್ದು, ಬಾಡಿಗೆ ಸಹ ಪಾವತಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದರು. 

ADVERTISEMENT

ಇದೇ ಮಾದರಿಯಡಿ ಕರ್ನಾಟಕದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ ಯೋಜನೆಗಳಲ್ಲಿ ಜಾರಿ ಮಾಡಬಹುದೇ ಎಂಬ ಬಗ್ಗೆ ಅಧ್ಯಯನ ನಡೆಸಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಂಬೈ ಕೊಳೆಗೇರಿ ಪುನರ್ ವಸತಿ ಪ್ರಾಧಿಕಾರದ ಅಧಿಕಾರಿಗಳನ್ನು ಕರ್ನಾಟಕಕ್ಕೆ ಭೇಟಿ ನೀಡುವಂತೆಯೂ ಆಹ್ವಾನಿಸಿದರು. ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಮಾಜಿ ಸಂಸದ ಹರ್ಬನ್ ಸಿಂಗ್, ಪ್ರಾಧಿಕಾರದ ಅಧಿಕಾರಿಗಳಾದ ಆಶೀಶ್ ಚೌದರಿ, ಬಾಲಾಜಿ ಮುಂಡೆ, ಅಭಯ್ ರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.