ADVERTISEMENT

ಅದ್ದೂರಿ ಬಸವ ಉತ್ಸವಕ್ಕೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 8:25 IST
Last Updated 24 ಮಾರ್ಚ್ 2011, 8:25 IST

ಬಸವಕಲ್ಯಾಣ: ಮಾರ್ಚ್ 25 ರಿಂದ ಮೂರು ದಿನ ಇಲ್ಲಿ ನಡೆಯುವ 2 ನೇ ಬಸವ ಉತ್ಸವಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ್ ಬೆಳಮಗಿ, ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಮತ್ತು ಜಿಲ್ಲಾಧಿಕಾರಿ ಸಮೀರ ಶುಕ್ಲಾ ಬುಧವಾರ ಸಿದ್ಧತೆಯನ್ನು ಪರಿಶೀಲಿಸಿದರು.ರಥ ಮೈದಾನದಲ್ಲಿ ಮುಖ್ಯ ವೇದಿಕೆ ನಿರ್ಮಿಸಲಾಗುತ್ತಿದ್ದು ಇಲ್ಲಿ ಉದ್ಘಾಟನಾ ಸಮಾರಂಭ ಮತ್ತು ಪ್ರತಿದಿನ ಸಂಜೆ 5.30 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಗೋಷ್ಠಿಗಳನ್ನು ಆಯೋಜಿಸಲಾಗುತ್ತದೆ. ಅಲ್ಲಮಪ್ರಭುದೇವರ ಗದ್ದುಗೆ ಮಠದ ಹತ್ತಿರ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ.

25 ರಂದು ಬೆಳಿಗ್ಗೆ 9 ಗಂಟೆಗೆ ಕಲಾ ಮೇಳಗಳೊಂದಿಗೆ ಕೋಟೆಯಿಂದ ಶರಣ ಹರಳಯ್ಯ ವೃತ್ತದವರೆಗೆ ಬಸವಜ್ಯೋತಿ ಭಾವೈಕ್ಯ ಮೆರವಣಿಗೆ ನಡೆಯುತ್ತದೆ. ಇಳಕಲ್ ಮಹಾಂತ ಶಿವಯೋಗಿಗಳು ಉದ್ಘಾಟಿಸುವರು. ಸಂಜೆ 5 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯುತ್ತದೆ. ಚಿತ್ರದುರ್ಗ ಶಿವಮೂರ್ತಿ ಮುರುಘಾ ಸ್ವಾಮೀಜಿ, ಇಳಕಲ್ ಮಹಾಂತ ಶಿವಯೋಗಿ, ಕೂಡಲಸಂಗಮ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮಿ ಸಾನಿಧ್ಯ ವಹಿಸುವರು.ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಹಾರಕೂಡ ಚನ್ನವೀರ ಶಿವಾಚಾರ್ಯರು, ಭಾತಂಬ್ರಾ ಶಿವಯೋಗೇಶ್ವರ ಸ್ವಾಮಿ, ಮುಚಳಂಬ ಪ್ರಣವಾನಂದ ಸ್ವಾಮಿ, ಬೆಲ್ದಾಳ ಸಿದ್ಧರಾಮ ಶರಣರು, ಅಕ್ಕ ಅನ್ನಪೂರ್ಣ ಬೀದರ, ವಿ.ಸಿದ್ಧರಾಮಣ್ಣ ನೇತೃತ್ವ ವಹಿಸುವರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ, ಪ್ರವಾಸೋದ್ಯಮ ಸಚಿವ ಜನಾರ್ದನರೆಡ್ಡಿ, ಪಶು ಸಂಗೋಪನಾ ಸಚಿವ ರೇವುನಾಯಕ್ ಬೆಳಮಗಿ ಪಾಲ್ಗೊಳ್ಳುವರು. ಸಂಸದ ಎನ್.ಧರ್ಮಸಿಂಗ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅಧ್ಯಕ್ಷತೆ ವಹಿಸುವರು.
26 ರಂದು ಬೆಳಿಗ್ಗೆ 10 ಗಂಟೆಗೆ ‘ಬಸವಣ್ಣನವರ ಮಹಾಮನೆಯ ಮಹದರ್ಥ’ ವಿಷಯ ಕುರಿತು ಗೋಷ್ಠಿ ನಡೆಯುತ್ತದೆ. ಇಳಕಲ್ ಗುರುಮಹಾಂತ ಸ್ವಾಮಿ, ಚಿತ್ರದುರ್ಗ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿ, ಬಾಗಲಕೋಟೆ ಇಮ್ಮಡಿ ಸಿದ್ಧರಾಮ ಸ್ವಾಮಿ, ಬೆಳಗಾವಿ ಮಲ್ಲಿಕಾರ್ಜುನ ಸ್ವಾಮಿ, ಬೇಲೂರ ಪಂಚಾಕ್ಷರಿ ಉರಿಲಿಂಗ ಪೆದ್ದಿ ಸ್ವಾಮಿ ನೇತೃತ್ವ ವಹಿಸುವರು. ನವದೆಹಲಿಯ ಸ್ವಾಮಿ ಅಗ್ನಿವೇಶ ಉದ್ಘಾಟಿಸುವರು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಧ್ಯಕ್ಷತೆ ವಹಿಸುವರು. ಪ್ರೊ.ಸಿ.ಎಚ್.ನಾರಿನಾಳ ಉಪನ್ಯಾಸ ನೀಡುವರು. ಡಾ.ಮ.ನ.ಜವರಯ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಅಂದು ಮಧ್ಯಾಹ್ನ 3 ಗಂಟೆಗೆ ‘ಸತ್ಯ ಶುದ್ಧ ಕಾಯಕ, ದಾಸೋಹ, ಪ್ರಸಾದ’ ವಿಷಯದ ಬಗ್ಗೆ ಗೋಷ್ಠಿ ನಡೆಯುತ್ತದೆ. ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಹೊಸದುರ್ಗ ಶಾಂತವೀರ ಸ್ವಾಮಿ, ಚಿತ್ರದುರ್ಗ ಬಸವ ಮಾಚಿದೇವ ಸ್ವಾಮಿ, ಬಸವ ಸರ್ದಾರ ಸೇವಾಲಾಲ ಸ್ವಾಮಿ, ಶರಣೆ ಬಸವರಾಜೇಶ್ವರಿ ನೇತೃತ್ವ ವಹಿಸುವರು. ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಉದ್ಘಾಟಿಸುವರು. ರಾಷ್ಟ್ರೀಯ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ತಂಬಾಕೆ ಅಧ್ಯಕ್ಷತೆ ವಹಿಸುವರು. ಡಾ.ಶಿವಗಂಗಾ ರುಮ್ಮಾ, ಶಿವರಾಜ ಪಾಟೀಲ ಉಪನ್ಯಾಸ ನೀಡುವರು.

27 ರಂದು ಬೆಳಿಗ್ಗೆ 10ಗಂಟೆಗೆ ‘ಬಸವಾದಿ ಶರಣರಿತ್ತ ಜೀವನ ಮೌಲ್ಯಗಳು’ ವಿಷಯದ ಗೋಷ್ಠಿ ನಡೆಯುತ್ತದೆ. ಬೀದರ ಚಿದಂಬರಾಶ್ರಮದ ಶಿವಕುಮಾರ ಸ್ವಾಮಿ, ಭಾತಂಬ್ರಾ ಶಿವಯೋಗೇಶ್ವರ ಸ್ವಾಮಿ, ಚಿತ್ರದುರ್ಗ ಬಸವಪ್ರಭು ಕೇತೇಶ್ವರ ಸ್ವಾಮಿ, ತಡೋಳಾ ರಾಜೇಶ್ವರ ಶಿವಾಚಾರ್ಯರು, ತ್ರಿಪುರಾಂತ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಮಾತೆ ಗಾಯತ್ರಿದೇವಿ ನೇತೃತ್ವ ವಹಿಸುವರು. ಬೆಂಗಳೂರು ಬೇಲಿಮಠದ ಶಿವರುದ್ರ ಸ್ವಾಮಿ ಉದ್ಘಾಟಿಸುವರು. ಕಲ್ಯಾಣ ನಾಡಿನ ಶರಣ ಪರಿಷತ್ತಿನ ಅಧ್ಯಕ್ಷ ರಂಜಾನ ದರ್ಗಾ ಅಧ್ಯಕ್ಷತೆ ವಹಿಸುವರು. ಹೈ-ಕ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಶಾಲಿನಿ ರಜನೀಶ, ಶಂಕರ ದೇವನೂರು, ಡಾ.ಜಯಶ್ರೀ ದಂಡೆ ಪಾಲ್ಗೊಳ್ಳುವರು. ಶೇಷಪ್ಪ ಗಬ್ಬೂರ, ರಾಜಕುಮಾರ ಮದಕಟ್ಟಿ ವಚನ ಸಂಗೀತ ಹಾಡುವರು.

ಅಂದು ಮಧ್ಯಾಹ್ನ 3 ಗಂಟೆಗೆ ‘ಬಸವಾದಿ ಶರಣರ ಮೌಲ್ಯಗಳ ಅಗತ್ಯತೆ’ ವಿಷಯದ ಬಗ್ಗೆ ಗೋಷ್ಠಿ ನಡೆಯುತ್ತದೆ. ಬೆಲ್ದಾಳ ಸಿದ್ಧರಾಮ ಶರಣರು, ತಂಗಡಗಿ ಭಾರತಿ ಅಪ್ಪಣ್ಣ ಸ್ವಾಮಿ, ಮೈಸೂರು ಜ್ಞಾನಪ್ರಕಾಶ ಸ್ವಾಮಿ, ಶಿವಯೋಗ ಸುಖಿ ಗಾಯತ್ರಿದೇವಿ, ಪಾಂಡೋಮಟ್ಟಿ ಗುರುಬಸವ ಸ್ವಾಮಿ, ಮಾತೆ ತೇಜಸ್ವೀನಿ ನೇತೃತ್ವ ವಹಿಸುವರು.

ಗುಲ್ಬರ್ಗ ವಿವಿ ಕುಲಪತಿ ಪ್ರೊ.ಈ.ಟಿ.ಪುಟ್ಟಯ್ಯ ಉದ್ಘಾಟಿಸುವರು. ಅಕ್ಕ ಅನ್ನಪೂರ್ಣ ಬೀದರ ಅಧ್ಯಕ್ಷತೆ ವಹಿಸುವರು. ಸಾಹಿತಿ ಡಾ.ದೇ.ಜವರೇಗೌಡ ಅತಿಥಿಗಳಾಗಿ ಪಾಲ್ಗೊಳ್ಳುವರು. ಈಶ್ವರ ಮಂಟೂರ್, ಡಾ.ಗಂಗಾಬಿಕೆ ಬೀದರ ಉಪನ್ಯಾಸ ನೀಡುವರು. ಸಂಜೆ 5.30 ಗಂಟೆಗೆ ಸಮಾರೋಪ ಸಮಾರಂಭ ನಡೆಯುತ್ತದೆ.ನಿಡಸೋಷಿ ಜಗದ್ಗುರು ಪಂಚಮಲಿಂಗೇಶ್ವರ ಸ್ವಾಮಿ ಸಾನಿಧ್ಯ ವಹಿಸುವರು. ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಭೀಮಣ್ಣ ಖಂಡ್ರೆ ಅಧ್ಯಕ್ಷತೆ ವಹಿಸುವರು. ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.