ಔರಾದ್: ತಾಲ್ಲೂಕಿನಲ್ಲಿ ಈಚೆಗೆ ಸುರಿದ ಆಲಿಕಲ್ಲು ಮಳೆಯಿಂದ ತೊಗರಿ, ಕಡಲೆ, ಕುಸುಬೆ, ಜೋಳ ಸೇರಿದಂತೆ ಹಲವು ಬೆಳೆಗಳು ಹಾಳಾಗಿವೆ.
ಕಟಾವಿಗೆ ಬಂದ 2 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ಬಿಳಿ ಜೋಳ ಸಂಪೂರ್ಣ ಹಾಳಾಗಿದೆ. ಜಾನುವಾರು ಮೇವಿಗೂ ಕೊರತೆಯಾಗಿದೆ. ರೈತರು ಕಂಗಾಲಾಗಿದ್ದಾರೆ.
‘ಬಿಳಿ ಜೋಳದ ಮೇವು ಜಾನುವಾರುಗಳ ಮುಖ್ಯ ಆಹಾರ. ಆದರೆ ಈ ಬಾರಿ ಬಿಳಿಜೋಳ ಬೆಳೆಯು ಆಲಿಕಲ್ಲು ಮಳೆಗೆ ಮಣ್ಣು ಪಾಲಾಗಿದೆ. ಈಗಲೇ ಮೇವು ಸಿಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಮೇವಿಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ವಾರದ ಜಾನುವಾರ ಸಂತೆಗೆ ಬಂದ ಜೋಜನಾ ಗ್ರಾಮದ ರೈತ ಮಲ್ಲಿಕಾರ್ಜುನ ಸ್ವಾಮಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
‘ಬೇಸಿಗೆ ಬರುವ ಮೊದಲೇ ಮೇವಿನ ಕೊರತೆ ಎದುರಾಗಿದೆ. ಅಲ್ಲಲ್ಲಿ ನೀರಾವರಿ ಇದ್ದವರು ಮೆಕ್ಕೆಜೋಳ ಬೆಳೆದು ಅದರ ಮೇವು ಜಾನುವಾರುಗಳಿಗೆ ತಿನ್ನಿಸುತ್ತಿದ್ದಾರೆ. ಅದು ಮಾರುಕಟ್ಟೆಯಲ್ಲಿ ₨5ಕ್ಕೆ ಒಂದು ಕಟ್ಟು ನೀಡುತ್ತಿದ್ದಾರೆ. ನಿತ್ಯ 5ರಿಂದ 10 ಕಟ್ಟು ಬೇಕಾಗುತ್ತದೆ. ಮೇವಿನ ವ್ಯವಸ್ಥೆಯಾಗದಿದ್ದಲ್ಲಿ ರೈತರು ತಮ್ಮ ಜಾನುವಾರುಗಳನ್ನು ಮಾರಿಕೊಳ್ಳುವ ಅನಿವಾರ್ಯತೆ ಎದುರಾಗಲಿದೆ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ ಆತಂಕ ವ್ಯಕ್ತಪಡಿಸುತ್ತಾರೆ.
ಪಕ್ಕದ ಮಹಾರಾಷ್ಟ್ರದಲ್ಲೂ ಆಲಿಕಲ್ಲು ಮಳೆಯಾಗಿರುವುದರಿಂದ ಅಲ್ಲಿಯೂ ಜೋಳದ ಮೇವು ಸಿಗುತ್ತಿಲ್ಲ. ಹೀಗಾಗಿ ಸದ್ಯ ಮೆಕ್ಕೆ ಜೋಳದ ಮೇವು ಮಾತ್ರ ಬಳಸುತ್ತಿದ್ದೇವೆ ಎಂದು ಗಣೇಶಪುರ ರೈತ ಪಾಂಡುರಂಗ ಹೇಳುತ್ತಾರೆ.
ಹಾನಿ ವರದಿ: ಪ್ರಾಥಮಿಕ ವರದಿ ಪ್ರಕಾರ ತಾಲ್ಲೂಕಿನಲ್ಲಿ 4,629 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಲ್ಲಿ 1,845 ಹೆಕ್ಟೇರ್ ಜೋಳ, 1,205 ಹೆಕ್ಟೇರ್ ಕಡಲೆ, 224 ಹೆಕ್ಟೇರ್ ಗೋಧಿ, 1,017 ಹೆಕ್ಟೇರ್ ತೊಗರಿ ಮತ್ತು 338 ಹೆಕ್ಟೇರ್ ಪ್ರದೇಶದಲ್ಲಿ ಕುಸುಬೆ ಬೆಳೆ ಹಾನಿಯಾಗಿರುವ ವರದಿಯಾಗಿದೆ. ಇದು ಪ್ರಾಥಮಿಕ ವರದಿಯಾಗಿದ್ದು, ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಆಶ್ರಯದಲ್ಲಿನ ಸಮೀಕ್ಷಾ ವರದಿ ಇನ್ನೂ ಪ್ರಗತಿಯಲ್ಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸೋಮಶೇಖರ ಬಿರಾದಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.