ADVERTISEMENT

ಇಂದಿನಿಂದ ಆನ್‌ಲೈನ್ ಬುಕಿಂಗ್

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 7:40 IST
Last Updated 23 ಫೆಬ್ರುವರಿ 2011, 7:40 IST

ಬೀದರ್: ತಾಲ್ಲೂಕಿನ ವಿಲಾಸಪುರ ಕೆರೆಯ ಬಳಿ ನಿರ್ಮಿಸಲಾಗಿರುವ ‘ಬ್ಲಾಕ್‌ಬಕ್ ಜಂಗಲ್ ಲಾಡ್ಜ್ ರೆಸಾರ್ಟ್; ಮಾರ್ಚ್ ಒಂದರಿಂದ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಮಂಗಳವಾರ ತಿಳಿಸಿದರು.ರೆಸಾರ್ಟ್ ಕಾಮಗಾರಿ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದ ಅವರು ‘ರೆಸಾರ್ಟ್ ಆನ್‌ಲೈನ್ ಬುಕಿಂಗ್ ಫೆ.23ರಿಂದ ಆರಂಭವಾಗಲಿದೆ’ ಎಂದರು.

ಪ್ರಥಮ ಹಂತದಲ್ಲಿ 18ಕಾಟೇಜುಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಏಳು ಕಾಟೇಜುಗಳು ಬಳಕೆಗೆ ಈಗಾಗಲೇ ಸಿದ್ಧವಾಗಿವೆ. ಇನ್ನುಳಿದ ಕಾಟೇಜುಗಳು ಒಂದು ವಾರದ ಒಳಗಾಗಿ ಉಪಯೋಗಕ್ಕೆ ಸಜ್ಜುಗೊಳ್ಳಲಿವೆ ಎಂದು ಅವರು ಹೇಳಿದರು.ಜಂಗಲ್ ಲಾಡ್ಜ್ ರೆಸಾರ್ಟ್ ಯೋಜನೆಗೆ 3.5ಕೋಟಿ ರೂ. ಬಿಡುಗಡೆಯಾಗಿದ್ದು, ಈಗಾಗಲೆ 2.75ಕೋಟಿ ರೂ. ವೆಚ್ಚ ಮಾಡಲಾಗಿದೆ. ಯೋಜನೆಯ ಸಂಪೂರ್ಣ ಅನುಷ್ಠಾನಕ್ಕಾಗಿ 1.2ಕೋಟಿ ರೂ. ಹೆಚ್ಚುವರಿ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಒಟ್ಟು 20ಕಾಟೇಜುಗಳನ್ನು ನಿರ್ಮಿಸುವ ಯೋಜನೆ ಹೊಂದಲಾಗಿದೆ. ಮೂರು ಮಾದರಿಯ ಕಾಟೇಜುಗಳು ಲಭ್ಯವಿವೆ. ಒಬ್ಬ ವ್ಯಕ್ತಿಗೆ ದಿನಕ್ಕೆ ಎಕ್ಸಿಕ್ಯೂಟಿವ್ ಕ್ಲಾಸ್ 3250 ರೂ. 3ಸಾವಿರ ರೂ. ಹಾಗೂ 2700ರೂ ದರ ನಿಗದಿಪಡಿಸಲಾಗಿದೆ. ಮೊದಲ ಮೂರು ತಿಂಗಳು ಶೇ.25ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು.

ರೆಸಾರ್ಟ್  ಪರಿಸರದ ಗುಡ್ಡದಲ್ಲಿ ಟ್ರೆಕ್ಕಿಂಗ್, ವಿಲಾಸಪುರ ಕೆರೆಯಲ್ಲಿ ಕೊರಾಕಲ್ (ತೆಪ್ಪ) ರೈಡಿಂಗ್, ಗಾಳದಲ್ಲಿ ಮೀನು ಹಿಡಿಯುವುದು, ಪಕ್ಷಿ ವೀಕ್ಷಣೆ, ಕಾಡಿನಲ್ಲಿ ಸಂಚಾರ ಸೇರಿದಂತೆ ಹಲವು ವಿನೋದ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು. ರೆಸಾರ್ಟ್ ಪರಿಸರದಲ್ಲಿ 40ಕ್ಕೂ ಅಧಿಕ ಕೃಷ್ಣಮೃಗಗಳನ್ನು ಗುರುತಿಸಲಾಗಿದ್ದು, ಇದರ ವೀಕ್ಷಣೆಗೂ ಸೌಲಭ್ಯ ದೊರಕಿಸಲಾಗುವುದು. ಇಲ್ಲಿಗೆ ಬರುವವರು ಬೀದರಿನ ಐತಿಹಾಸಿ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗುವಂತೆ ಪ್ಯಾಕೇಜ್ ಸಿದ್ಧಪಡಿಸಲಾಗುವುದು. ಕಾರಂಜಾ ಜಲಾಶಯದಲ್ಲಿ ಜಲಕ್ರೀಡೆ ಆರಂಭಿಸಲು ಪ್ರಸ್ತಾವ ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು.

ರೆಸಾರ್ಟ್‌ನಲ್ಲಿ  ಸದ್ಯ 10ಮಂದಿ ಸ್ಥಳೀಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಸೂಕ್ತ ತರಬೇತಿ ನೀಡಲಾಗಿದೆ. ನಾಲ್ಕು ತೆಪ್ಪಗಳು ಮುಂದಿನ ಒಂದು ವಾರದ ಒಳಗಾಗಿ ಇಲ್ಲಿಗೆ ಬರಲಿವೆ. ರೆಸಾರ್ಟ್‌ನಲ್ಲಿ ಸೋಲಾರ್ ಹೀಟರ್ ಅಳವಡಿಸಲಾಗಿದೆ. ಸುಸಜ್ಜಿತ ಕ್ಯಾಂಟೀನ್ ಸೇವೆಗೆ ಸಿದ್ಧವಾಗಿದೆ. ಕಾಟೇಜ್ ಬುಕಿಂಗ್ ಮಾಡಲು www.junglelodgesresort.com ಸಂಪರ್ಕಿಸಬಹುದು.
 
ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-40554055, 94495-99774 ಸಂಪರ್ಕಿಸಬಹುದು. ವಿಲಾಸಪುರ ಕೆರೆಯ ಮನೋಹರ ಪ್ರಕೃತಿಯ ನಡುವೆ ತಲೆ ಎತ್ತಿರುವ ಕಾಟೇಜುಗಳ ಬಾಲ್ಕನಿಯಿಂದ  ಪ್ರಕೃತಿಯ ರುದ್ರ ರಮಣೀಯ ಸೌಂದರ್ಯವನ್ನು ಸವಿಯಬಹುದಾಗಿದೆ. ಪ್ರತಿಯೊಂದು ಕಾಟೇಜಿನ ನಡುವೆ ಸಾಕಷ್ಟು ಅಂತರ ಕಾಪಾಡಲಾಗಿದ್ದು, ಇಲ್ಲಿ ಭೇಟಿ ನೀಡುವವರಿಗೆ ವಿಶೇಷ ಅನುಭವ ನೀಡಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.