ADVERTISEMENT

ಚುನಾವಣೆ: ನಿಷ್ಪಕ್ಷಪಾತ ಕೆಲಸ ನಿರ್ವಹಿಸಿ

ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಚ್‌.ಆರ್‌. ಮಹಾದೇವ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 6:19 IST
Last Updated 16 ಏಪ್ರಿಲ್ 2018, 6:19 IST

ಬೀದರ್: ‘ವಿಧಾನಸಭಾ ಚುನಾವಣೆಗೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿಗಳು ಚುನಾವಣೆ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ. ಎಚ್‌.ಆರ್‌. ಮಹಾದೇವ ಸಲಹೆ ಮಾಡಿದರು.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

‘ಈ ಬಾರಿ ಚುನಾವಣೆಯಲ್ಲಿ ಕೆಲವು ಸುಧಾರಣೆ ಹಾಗೂ ಬದಲಾವಣೆ ಮಾಡಲಾಗಿದೆ. ಅಧಿಕಾರಿಗಳು ಅವುಗಳನ್ನು ಸರಿಯಾಗಿ ತಿಳಿದುಕೊಳ್ಳ
ಬೇಕು. ಮತದಾನ ಸಮಯದಲ್ಲಿ ಒಂದು ಸಣ್ಣ ತಪ್ಪು ನಡೆದರೂ ಕೂಡ ಅದು ಮರುಮತದಾನಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅಧಿಕಾರಿ ಹಾಗೂ ಸಿಬ್ಬಂದಿ ಬಹಳ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಆರು ತಿಂಗಳಿನಿಂದ ಚುನಾವಣೆ ಸಿದ್ಧತೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಚುನಾವಣೆ, ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬೇರಾಗಿದೆ. ಹೀಗಾಗಿ ಈ ಕರ್ತವ್ಯವನ್ನು ದೇಶ ಸೇವೆ ಎಂದು ಭಾವಿಸಿ ಕಾರ್ಯ ಪ್ರವೃತ್ತರಾಗಬೇಕು. ಚುನಾವಣೆ ಕೆಲಸಕ್ಕೆ ನೇಮಕವಾದ ಎಲ್ಲ ಅಧಿಕಾರಿಗಳು ಚುನಾವಣಾ ಆಯೋಗದ ನಿಯಂತ್ರಣ, ಮೇಲ್ವಿಚಾರಣೆ ಮತ್ತು ಶಿಸ್ತಿಗೆ ಒಳಪಟ್ಟಿರುತ್ತಾರೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಮಾತನಾಡಿ, ‘ಪೋಲಿಂಗ್ ಏಜೆಂಟರ್ ಸಮ್ಮುಖದಲ್ಲಿ ಬೆಳಿಗ್ಗೆ 6 ಗಂಟೆಗೆ ಅಣಕು ಮತದಾನ ನಡೆಸಬೇಕು. ಅಣಕು ಮತದಾನದಲ್ಲಿ ಕನಿಷ್ಠ 50 ಮತಗಳನ್ನು ಹಾಕಬೇಕು. ಬಳಿಕ ದೃಢೀಕರಣ ಭರ್ತಿ ಮಾಡಿ ಹಾಜರಿರುವ ಏಜೆಂಟರು ಸಹಿ ಪಡೆದು ಸೆಕ್ಟರ್ ಅಧಿಕಾರಿಗಳಿಗೆ ನೀಡಬೇಕು. ಈ ಮತದಾನ ಮುಗಿದ ನಂತರ ಕಂಟ್ರೊಲ್ ಯೂನಿಟ್ ನಲ್ಲಿ ಕ್ಲಿಯರ್ ಮಾಡಿ ಸ್ವೀಚ್ ಆಫ್ ಮಾಡಿ ಸೀಲ್ ಮಾಡಬೇಕು’ ಎಂದು ಮಾಹಿತಿ ನೀಡಿದರು.

‘ವಿವಿ ಪ್ಯಾಟ್‌ನಲ್ಲಿರುವ ಮತಚೀಟಿಗಳನ್ನು ಕ್ಲಿಯರ್ ಮಾಡಿ ಒಂದು ಕವರ್‌ನಲ್ಲಿ ಸೀಲ್ ಮಾಡಬೇಕು. ನಂತರ ಕಂಟ್ರೋಲ್ ಯೂನಿಟ್ ಹಾಗೂ ವಿವಿಪ್ಯಾಟಗಳನ್ನು ಸ್ವಿಚ್ ಆಫ್ ಮಾಡಿ ಸೀಲ್ ಮಾಡಿ ಮತದಾನಕ್ಕೆ ಸಿದ್ಧಪಡಿಸಿಕೊಳ್ಳಬೇಕು. ಬೆಳಗ್ಗೆ 7ಕ್ಕೆ ಮತದಾನ ಪ್ರಾರಂಭಿಸಬೇಕು. ಮತದಾನ ಆರಂಭದಲ್ಲಿ ಪೂಜೆ, ಆರತಿ, ದೀಪ ಇತ್ಯಾದಿ ನಿಷೇಧಿಸಲಾಗಿದೆ’ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಡಾ. ಶಂಕರ ವನಕ್ಯಾಳ ಮಾತನಾಡಿ, ‘ಸಂಜೆ 6 ಗಂಟೆಗೆ ಮತದಾನ ಮುಕ್ತಾಯ ಮಾಡಬೇಕು. ಮತದಾನ ಮುಕ್ತಾಯದ ಸಂದರ್ಭದಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರೆ ಕೊನೆಯಿಂದ ಕ್ರಮ ಸಂಖ್ಯೆಯ ಚೀಟಿ ನೀಡಿ ಮತದಾನಕ್ಕೆ ಅವಕಾಶ ನೀಡಬೇಕು. ಮತದಾನ ಮುಕ್ತಾಯವನ್ನು ಪಿಆರ್‍ಒ ಅವರು ಘೋಷಣೆ ಮಾಡಬೇಕು. ಬಳಿಕ ಕಂಟ್ರೋಲ್ ಯುನಿಟ್‌ನಲ್ಲಿ ಕ್ಲೋಸ್ ಬಟನ್ ಒತ್ತಿ ಮತದಾನ ಮುಕ್ತಾಯಗೊಳಿಸಬೇಕು. ಎಲ್ಲಾ ಮತಯಂತ್ರಗಳನ್ನು ಸ್ವಿಚ್ ಆಪ್ ಮಾಡಿ ಸೀಲ್ ಮಾಡಬೇಕು’ ಎಂದು ತಿಳಿಸಿದರು. ಜಿಲ್ಲಾ ಚುನಾವಣಾ ಮಾಸ್ಟರ್ ಟ್ರೇನರ್ ಗೌತಮ ಅರಳಿ, ರಮೇಶ ಮಠಪತಿ ಅವರು ತರಬೇತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.