ADVERTISEMENT

ಟನ್ ಕಬ್ಬಿಗೆ ರೂಪಾಯಿ 50 ಪಾವತಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 6:35 IST
Last Updated 17 ಸೆಪ್ಟೆಂಬರ್ 2011, 6:35 IST

ಚಿಟಗುಪ್ಪಾ:ಕಳೆದ 2010-11ನೇ ಸಾಲಿಗೆ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಪ್ರತಿ ಟನ್‌ಗೆ ಹೆಚ್ಚುವರಿಯಾಗಿ ರೂ.50 ನವೆಂಬರ್ ತಿಂಗಳಲ್ಲಿ ಪಾವತಿಸಲಾಗುತ್ತದೆ ಎಂದು ಕಾರ್ಖಾನೆಯ ಅಧ್ಯಕ್ಷ ಸುಭಾಷ ಕಲ್ಲೂರ ಹೇಳಿದ್ದಾರೆ.

ಶುಕ್ರವಾರ ಹುಮನಾಬಾದ್ ತಾಲ್ಲೂಕಿನ ಮಂಗಲಗಿ ಗ್ರಾಮದಲ್ಲಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ನಿಯಮಿತ ದಿಂದ ಮಂಗಲಗಿ ವಿಭಾಗದ ರೈತರಿಗಾಗಿ ಎರ್ಪಡಿಸಿದ್ದ, ಕಬ್ಬು ಉತ್ಪಾದಕರು, ಸದಸ್ಯರ ಸಂಪರ್ಕ ಸಭೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು, ಹೆಚ್ಚಿನ ಅನುದಾನ ಪಡೆದು ಉಳಿದ 50 ರೂ ಪಾವತಿಸಲಾಗುತ್ತದೆ, ವರ್ಷಕ್ಕೆ 6 ಕೋಟಿ ಮೊತ್ತದ ಹಣ ಡಿಸಿಸಿ ಬ್ಯಾಂಕ್‌ಗೆ ಬಡ್ಡಿ ತುಂಬುತ್ತಿದ್ದು, 40ಕೋಟಿ ಸಾಲ, 70 ಕೋಟಿ ನಷ್ಟದಲ್ಲಿ ಕಾರ್ಖಾನೆ ನಡೆಯುತ್ತಿದೆ, 2011-12ನೇ ಸಾಲಿನ ಹಂಗಾಮಿಗಾಗಿ ಈಗಾಗಲೇ 215 ಕಾರ್ಮಿಕರ ತಂಡ, 275 ಬಂಡಿಗಳಿಗೆ ನೇಮಿಸಿಕೊಂಡು 5.50 ಲಕ್ಷ ರೂ ಮೊತ್ತ ಪಾವತಿಸಲಾಗಿದ್ದು, ಕಳೆದ ವರ್ಷ ರೈತರು ಅನುಭವಿಸಿದ ನೋವು, ಈ ವರ್ಷ ಉದ್ಭವಿಸದಂತೆ ಎಚ್ಚರಿಕೆಯಿಂದ ಕಾರ್ಖಾನೆಯ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಸಿದ್ಧತೆ ಮಾಡಿಕೊಂಡಿದ್ದು, ಅ.15ಕ್ಕೆ ಕಾರ್ಖಾನೆ ಕಬ್ಬು ನುರಿಸುವ ಕಾರ್ಯ ಆರಂಭಿಸಿ ರೈತರ ಕಬ್ಬು ವ್ಯವಸ್ಥಿತ ರೀತಿಯಲ್ಲಿ  ಕಾರ್ಖಾನೆಗೆ ತೆಗೆದುಕೊಂಡು ಹೋಗುತ್ತೇವೆ ಪ್ರಸಕ್ತ ಸಾಲಿನಲ್ಲಿ 6 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

ರೈತ ಸಂಘಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ್ ತಂಬಾಕೆ ಮಾತನಾಡಿ, ಕಬ್ಬು ಕಟಾವಿಗೆ ಕಾರ್ಮಿಕದ ಸಮಸ್ಯೆ ಉದ್ಭವಿಸುತ್ತಿದ್ದು, ಕಾರ್ಖಾನೆಯ ಆಡಳಿತ ಮಂಡಳಿ ತಕ್ಷಣ ತಂತ್ರಜ್ಞಾನ ಬಳಕೆ ಮಾಡಿಕೊಂಡಿ ಯಂತ್ರದಿಂದ ಕಬ್ಬು ಕಟಾವು ಮಾಡುವ ಕಾರ್ಯ ಆರಂಭಿಸಬೇಕು, ರೈತರಿಗೆ ವೈಜ್ಞಾನಿಕ ರೀತಿಯಲ್ಲಿ ಬೆಲೆ ನೀಡಬೇಕು, ರಾಷ್ಟ್ರದಲ್ಲಿ ಮೇಲಿಂದ ಮೇಲೆ ತೈಲ ಬೆಲೆ ಹೆಚ್ಚಾಗುತ್ತದೆ ಆದರೆ ಸಕ್ಕರೆ ಬೆಲೆಗೆ ಮಾತ್ರ ಸರ್ಕಾರ ಕಡಿವಾಣ ಹಾಕಿದಕ್ಕೆ ರೈತರ ವಿರೋಧವಿದೆ, ರೈತರ ಪ್ರತಿ ಉತ್ಪನ್ನವು ದೈನಂದಿನ ಬದುಕಿಗೆ ಅವಶ್ಯಕವಾಗಿದ್ದು, ಅವುಗಳಿಗೆ ವೈಜ್ಞಾನಿಕ ರೀತಿಯಲ್ಲಿ ಬೆಲೆ ನೀಡಬೇಕು ಎಂದು ತಿಳಿಸಿದರು.

ಮುಖ್ಯ ಕಬ್ಬು ಅಭಿವೃದ್ಧಿ ಅಧಿಕಾರಿ ಬಾಬುರಾವ ಹುಲಸೂರೆ ಪ್ರಾಸ್ತಾವಿಕ ಮಾತನಾಡಿ, ರೈತರಿಗೆ ಕ್ಷೇತ್ರ ಸಹಾಯಕರು ಒಂದು ವಾರದಲ್ಲಿ ಅವರು ಬೆಳೆದಿರುವ ಕಬ್ಬಿನ ಲಾವಣಿ ಪತ್ರಿಕೆ ಮನೆಗಳಿಗೆ ತಂದು ಒಪ್ಪಿಸುತ್ತಾರೆ, ದಕ್ಷತೆಯಿಂದ ಸೇವೆ ಸಲ್ಲಿಸುತ್ತಾರೆ, ಪ್ರತಿ ರೈತರ ತೋಟಗಳಿಗೆ ತಪ್ಪದೆ ಭೇಟಿ ನೀಡಿ ಸಲಹೆ ನೀಡುತ್ತಾರೆ ಎಂದು ತಿಳಿಸಿದರು.

ಶ್ರೀಮಂತ ಪಾಟೀಲ್, ಬಿ ಎಸ್ ಎಸ್ ಕೆ ಮಾಜಿ ನಿರ್ದೇಶಕ ಶಂಕರರಾವ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕ ಓಂಪ್ರಕಾಶ್ ಮಾತನಾಡಿದರು. ನಾಮನಿರ್ದೇಶಕ ಸದಸ್ಯೆ ಪದ್ಮಾವತಿ ಪಾಟೀಲ್ ವೇದಿಕೆಯಲ್ಲಿದ್ದರು.

ಎಪಿಎಂಸಿ ತಾಲ್ಲೂಕು ಅಧ್ಯಕ್ಷ ನಾರಾಯಣರೆಡ್ಡಿ ಬಿರಾದಾರ್,ನಿರ್ದೇಶಕ ವಿಶ್ವೆನಾಥ ಪಾಟೀಲ್, ಮಾಜಿ ನಿರ್ದೇಶಕ ಸಂಗಪ್ಪ ಪಾಟೀಲ್,ಪ್ರಭುರಾವ ಹಾಲಹಳ್ಳಿ, ಮಹ್ಮದ್ ಪಟೇಲ್ ಅತಿಥಿಗಳಾಗಿದ್ದರು. ನಿರ್ದೇಶಕ ಮಾಣಿಕಪ್ಪ ಹಾಂವಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಪಿ ಕೆ ಪಿ ಎಸ್ ಬ್ಯಾಂಕ್ ಅಧ್ಯಕ್ಷ ವೈಜಿನಾಥ ವೀರಾರೆಡ್ಡಿ ನಿರೂಪಿಸಿದರು, ದಿಗಂಬರ್ ಸ್ವಾಮಿ ವಂದಿಸಿದರು. ಮಂಗಲಗಿ, ತಾಳಮಡಗಿ, ಉಡಬಾಳ ಗ್ರಾಮಗಳ ನೂರಾರು ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.