ಬೀದರ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅಕ್ಟೋಬರ್ 29 ರಂದು ನಗರಕ್ಕೆ ಭೇಟಿ ನೀಡಲಿರುವ ಪ್ರಯುಕ್ತ ವಿಶೇಷ ರಕ್ಷಣಾ ದಳ(ಎಸ್ಪಿಜಿ), ಗುಪ್ತದಳ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಂಡ ಗುರುವಾರ ನಗರದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
ಎಸ್ಪಿಜಿ ಸಿಬ್ಬಂದಿ ವಾಯುಪಡೆ ತರಬೇತಿ ಕೇಂದ್ರದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಕಾರ್ಯಕ್ರಮ ನಡೆಯಲಿರುವ ನೆಹರೂ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಸ್ಪಿಜಿ ಅಧಿಕಾರಿಗಳು ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿದರು.
ನಗರ ಪ್ರವೇಶ ಮಾರ್ಗಗಳಲ್ಲಿ ನಾಕಾ ಬಂದಿ ಮಾಡಿ ವಾಹನಗಳ ತಪಾಸಣೆ ನಡೆಸಲು ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಿದರು. ನೆಹರೂ ಕ್ರೀಡಾಂಗಣ ಕಡೆಗೆ ಹೋಗುವ ಮಾರ್ಗದಲ್ಲಿನ ವಾಹನ ಸಂಚಾರ ನಿಷೇಧಿಸುವಂತೆ ಹಾಗೂ ಪರ್ಯಾಯ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಅವುವು ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.
‘ಹೊರಗಡೆಯಿಂದ ನಗರಕ್ಕೆ ಬರುತ್ತಿರುವ ಪ್ರತಿಯೊಂದು ವಾಹನದ ತಪಾಸಣೆ ಮಾಡಲಾಗುತ್ತಿದೆ. ನಗರದ ಲಾಡ್ಜ್ಗಳಲ್ಲಿ ತಂಗಿರುವ ವ್ಯಕ್ತಿಗಳ ವಿವರಗಳನ್ನು ಪಡೆಯಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ತಿಳಿಸಿದರು. ‘ನಗರದ ದೇವಸ್ಥಾನ, ಚರ್ಚ್, ಮಸೀದಿ ಹಾಗೂ ಪ್ರಾರ್ಥನಾ ಮಂದಿರಗಳ ಮೇಲೆ ನಿಗಾ ಇಡಲಾಗಿದೆ. ಜಿಲ್ಲೆಯ ಗಡಿಯಲ್ಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ’ ಎಂದು
ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.