ADVERTISEMENT

ಪರ್ಯಾಯ ಇಂಧನದತ್ತ ಚಿತ್ತ ಹರಿಸಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 7:25 IST
Last Updated 2 ಫೆಬ್ರುವರಿ 2011, 7:25 IST

ಬೀದರ: ಇಂಧನ ಮೂಲಗಳು ದಿನೇ ದಿನೇ ಕಡಿಮೆ ಆಗುತ್ತಿರುವುದರಿಂದ ಇದರ ಪರ್ಯಾಯವಾಗಿ ಸೂರ್ಯ, ಗಾಳಿ ಹಾಗೂ ನೀರಿನಿಂದ ಉತ್ಪಾದನೆಯಾಗುವ ಶಕ್ತಿಗಳ ಬಳಕೆ ಮಾಡುವುದು ಅತೀ ಅವಶ್ಯಕವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಶ್ರೀ ಶರಣಪ್ಪ ಮುದಗಲ್ ನುಡಿದರು.ನಗರದ ಹೀರಾಲಾಲ ಪನ್ನಾಲಾಲ ಪದವಿ ಪೂರ್ವ ಕಾಲೇಜಿನಲ್ಲಿ ಹೊಸ ಮತ್ತು ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳ ಸಚಿವಾಲಯ ನವದೆಹಲಿ ಹಾಗೂ ಅಕ್ಕಮಹಾದೇವಿ ಮಹಿಳಾ ಮಂಡಳ ನಾವದಗೇರಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ನವೀಕರಣಗೊಳ್ಳುವ ಶಕ್ತಿಯ ಪ್ರಸ್ತುತ ವ್ಯವಸ್ಥೆ ಕುರಿತ ರಾಷ್ಟ್ರೀಯ ವಿಚಾರ ಸಂಕೀರ್ಣ ಉದ್ಘಾಟಿಸಿ  ಮಾತನಾಡಿದರು.

ಪರಿಸರಕ್ಕೆ ಮಾರಕವಾಗಿರುವ ಇಂಧನ ಮೂಲಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಅರಣ್ಯ ಕಡಿಮೆ ಆಗುತ್ತಿರುವುದರಿಂದ ವಾತಾವರಣದಲ್ಲಿ ಏರುಪೇರು ಉಂಟಾಗುತ್ತಿದೆ. ಇಂದು ಗಾಳಿ, ಸೂರ್ಯ ಹಾಗೂ ಬಯೋಗ್ಯಾಸ್‌ನಂಥ ಶಕ್ತಿಗಳ ಬಗ್ಗೆ ಯುವ ಪೀಳಿಗೆಗೆ ತಿಳಿಸಬೇಕು ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಭಾರತೀಯ ಆಹಾರ ನಿಗಮದ ಸದಸ್ಯ ಶಿವಯ್ಯ ಸ್ವಾಮಿ, ಪ್ರಾಚಾರ್ಯ ಬುಳ್ಳಾ ಬಸವರಾಜ ಮಾತನಾಡಿ, ಸಾಂಪ್ರದಾಯಿಕ ಮೂಲಗಳ ಬದಲಾಗಿ ಹೊಸ ಮೂಲಗಳನ್ನು ಹುಡುಕಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಗಡಿ ಪ್ರದೇಶಾಭಿವೃದ್ಧಿ ಮಂಡಳಿಯ ಸದಸ್ಯ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ, ನಮ್ಮ ಸಂಪನ್ಮೂಲಗಳನ್ನು ನಾವೇ ಕಾಪಾಡಿಕೊಳ್ಳಬೇಕು. ಹಾಗೂ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದರು.ಆರ್.ಕೆ. ಚಾರಿ ಹಾಗೂ ಅಬ್ದುಲ್ ಶಫಿ ಉಪಸ್ಥಿತರಿದ್ದರು. ಕರುಣಾಮಯ ಯುವಕ ಸಂಘದ ಅಧ್ಯಕ್ಷ ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು, ಶಿವಕುಮಾರ ಸ್ವಾಮಿ ನಿರೂಪಿಸಿದರು. ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷೆ  ನೀಲಗಂಗಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.