ಹುಮನಾಬಾದ್: ಒಣ ಬೇಸಾಯ ಅವಲಂಬಿಸಿರುವ ರಾಜ್ಯದ ಶೇ 70ರಷ್ಟು ರೈತರು ಸ್ವಾಭಿಮಾನ ಹಾಗೂ ಸ್ವಾವಲಂಬಿ ಜೀವನ ಸಾಗಿಸಬೇಕು. ಆ ನಿಟ್ಟಿನಲ್ಲಿ ಅವರನ್ನು ಆರ್ಥಿಕವಾಗಿ ಸಬಲಾರಾಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಒಣ ಬೇಸಾಯ ಕೈಗೊಳ್ಳುವ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೃಷಿಭಾಗ್ಯ ಯೋಜನೆ ಜಾರಿಗೆ ತಂದಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಕೃಷಿಭಾಗ್ಯ ಯೋಜನೆ ಅನುಷ್ಠಾನ ಪರಿಶೀಲನೆಗಾಗಿ ಗುರುವಾರ ತಾಲ್ಲೂಕಿನ ಸೇಡೋಳ್ ಗ್ರಾಮದಲ್ಲಿ ಕೈಗೊಂಡ ಪಾಲಿಹೌಸ್, ನಿಂಬೂರ್ ಗ್ರಾಮದಲ್ಲಿ ಕೃಷಿಹೊಂಡ ಪರಿಶೀಲಿಸಿ ಅವರು ಮಾತನಾಡಿದರು.
ಪಾಲಿಹೌಸ್ ಬೇಸಾಯದಿಂದ ಅತ್ಯಂತ ಕಡಿಮೆ ನೀರು, ಕಳೆ ಹಾಗೂ ಕೀಟ ರಹಿತ ಗುಣಮಟ್ಟದ ಹಣ್ಣು, ತರಕಾರಿ ಉತ್ಪನ್ನ ಜೊತೆಯಲ್ಲಿ ಅತ್ಯಧಿಕ ಲಾಭ ಪಡೆಯಲು ಸಾಧ್ಯ. ಈ ಎಲ್ಲದರ ಜೊತೆಗೆ ಸರ್ಕಾರ ಪ್ರತೀ ಫಲಾನುಭವಿಗೆ ₹ 11.30 ಲಕ್ಷ ಸಹಾಯಧನ ನೀಡುತ್ತದೆ ಎಂಬುದು ಮನವರಿಕೆಯಾದ ನಂತರ ಈ ವರ್ಷದಿಂದ ರೈತರಿಂದ ಹೆಚ್ಚಿನ ಬೇಡಿಕೆ ಬಂದಿದೆ ಎಂದರು.
ಇನ್ನು ಒಣ ಬೇಸಾಯ ಕೈಗೊಳ್ಳುವ ರೈತರು ಮಳೆ ಬಂದಾಗ ವ್ಯರ್ಥ ಪೋಲಾಗುವ ನೀರನ್ನು ವೈಜ್ಞಾನಿಕ ಆಧಾರಿತ ಕೃಷಿಹೊಂಡ ನಿರ್ಮಿಸಿ, ನೀರು ಸಂಗ್ರಹಿಸಿಕೊಂರೆ ಆಪತ್ಕಾಲದಲ್ಲಿ ನೀರು ಬಳಸಿ ಅಧಿಕ ಲಾಭ ಪಡೆಯಲು ಸಾಧ್ಯ.
ಇದಕ್ಕಾಗಿ ₹ 80ರಿಂದ ₹1ಲಕ್ಷ ಸಹಾಯಧನ ನೀಡುತ್ತಿರುವುದು ಮನಗಂಡು ಹುಮನಾಬಾದ್ ತಾಲ್ಲೂಕು ಒಂದರಲ್ಲೇ 396 ಫಲಾನುಭವಿಗಳು ಕೃಷಿಹೊಂಡ, 8 ಮಂದಿ ಪಾಲಿಹೌಸ್ ನಿರ್ಮಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 30ಕ್ಕೂ ಅಧಿಕ ಮಂದಿ ಪಾಲಿಹೌಸ್ ಪ್ರಯೋಜನ ಪಡೆದಿದ್ದಾರೆ ಎಂದರು.
ಬೀದರ್ಗೆ ಹೆಚ್ಚಿನ ಆದ್ಯತೆ: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರ ಬೇಡಿಕೆ ಗಮನದಲ್ಲಿ ಇಟ್ಟುಕೊಂಡು ರಾಜ್ಯಕ್ಕೆ ನೀಡುವ ಅನುದಾನ ಪೈಕಿ ಬೀದರ್ಗೆ ಅತ್ಯಧಿಕ ಅನುದಾನ ನೀಡಲಾಗುವುದು. ಸಚಿವ ಶಾಸಕರ ಒತ್ತಡದ ಪರಿಣಾಮ 2015ರಲ್ಲಿ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಬೆಳೆಗೆ ₹18 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ವಿವಿಧ ಪರಿಹಾರ ಸೇರಿ ಜಿಲ್ಲೆಗೆ ಒಂದು ವರ್ಷದಲ್ಲಿ ₹400 ಕೋಟಿ ಪರಿಹಾರ ಒದಗಿಸಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ವಿವಿಧ ನೀರಾವರಿ ಯೋಜನೆ ಅನುಷ್ಠಾನ ಸಂಬಂಧ ಈಗಾಗಲೇ ಸರ್ಕಾರಕ್ಕೆ ₹3 ಸಾವಿರ ಕೋಟಿ ಯೋಜನೆಗಳ ಪ್ರಸ್ತಾವ ಸಲ್ಲಿಸಲಾಗಿದೆ. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರ ಬಾಕಿ ಹಣವನ್ನು 15 ದಿನಗಳಲ್ಲಿ, ಕಾರ್ಮಿಕರ ಬಾಕಿಯನ್ನು ಶೀಘ್ರ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
‘ಈವರೆಗೆ ಜಿಲ್ಲೆಗೆ ಸಚಿವ ಸ್ಥಾನ ನೀಡಿಲ್ಲ ಎಂಬ ಕೊರಗಿತ್ತು. ಈಗ ಆ ಕೊರಗು ನೀಗಿದೆ. ಜನರು ಖಂಡ್ರೆ ಅವರ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರೈತರು ಹಾಗೂ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಸ್ಥಿತಿಗತಿ ನಿಮ್ಮ ಕಣ್ಮುಂದೆ ಇದೆ. ಜನರ ನಿರೀಕ್ಷೆಯನ್ನು ಹುಸಿಯಾಗಿಸದಿರಿ’ ಎಂದು ಸಚಿವ ಈಶ್ವರ ಖಂಡ್ರೆ ಅವರಿಗೆ ಶಾಸಕ ರಾಜಶೇಖರ ಬಿ.ಪಾಟೀಲ ಸಲಹೆ ನೀಡಿದರು.
ಸಾಲ ಮನ್ನಾ ಮಾಡಿ: ಬಸವಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ, ರಕ್ಷಾ ಬಂಧನ ಪವಿತ್ರ ದಿನದಂದು ಜಿಲ್ಲೆಗೆ ಭೇಟಿ ನೀಡಿರುವ ಸಚಿವ ಕೃಷ್ಣ ಬೈರೇಗೌಡರು ಆರ್ಥಿಕ ಸಂಕಷ್ಟದಲ್ಲಿರುವ ಜಿಲ್ಲೆಯ ರೈತರಿಗೆ ರಕ್ಷೆ ನೀಡಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದ ರೀತಿಯಲ್ಲಿ ನೀವು ರೈತರ ಸಾಲಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.
ನಿಂಬೂರನಲ್ಲಿ ಏರ್ಪಡಿಸಿದ್ದ ರೈತರೊಂದಿನ ಸಂವಾದದಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ವಿವಿಧ ಇಲಾಖೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಿಬಾಯಿ ಸೇರಿಕಾರ, ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ ಇದ್ದರು.
ತಾಲ್ಲೂಕಿನ ಸೇಡೋಳ್ ಗ್ರಾಮದಲ್ಲಿ ಬುಧವಾರ ವಿಷ ಸೇವಿಸಿ, ಆತ್ಮಹತ್ಯೆಗೆ ಶರಣಾದ ರೈತ ಗುಂಡಪ್ಪ ಹುಪಳೆ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ವೈದ್ಯಕೀಯ ವರದಿ ಆಧರಿಸಿ ಪರಿಹಾರ ನೀಡುವ ಕುರಿತು ಚಿಂತನೆ ನಡೆಸಲಾಗುವುದು ಎಂದರು.
***
ರಾಜ್ಯದಲ್ಲಿ ಶೇ 70ರಷ್ಟು ರೈತರು ಒಣ ಬೇಸಾಯ ಅವಲಂಬಿಸಿದ್ದಾರೆ. ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾನ್ನಗಿಸಲು ಕೃಷಿಭಾಗ್ಯ ಯೋಜನೆ ಜಾರಿಗೆ ತರಲಾಗಿದೆ.
-ಕೃಷ್ಣಬೈರೇಗೌಡ, ಕೃಷಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.