ಬೀದರ್: ಬಾನಿನಲ್ಲಿ ಹಾರಿದ `ಹಕ್ಕಿ~ಯ ಆಕಾರದ ಗಾಳಿಪಟದೊಂದಿಗೆ ಏಳೆಂಟು `ಹದ್ದು~ಗಳು ಸರಸವಾಡಿದ ಪ್ರಸಂಗ ಬೀದರ್ ಉತ್ಸವದ ನಿಮಿತ್ತ ನಗರದ ಐತಿಹಾಸಿಕ ಕೋಟೆಯಲ್ಲಿ ಶನಿವಾರ ಆರಂಭಗೊಂಡ ಪತಂಗ ಉತ್ಸವದಲ್ಲಿ ಕಂಡು ಬಂದಿತು.
ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಹಕ್ಕಿ ಆಕಾರದ ಗಾಳಿಪಟ ಆಕಾಶದಲ್ಲಿ ಎತ್ತರಕ್ಕೆ ಹಾರುತ್ತಲೇ ತಮ್ಮ ಸಹಪಾಠಿಯೇ ಇರಬಹುದು ಎಂದು ಭಾವಿಸಿ ಏಳೆಂಟು ಹಕ್ಕಿಗಳು ಅದನ್ನು ಸುತ್ತುವರೆದವು. ಕೆಲ ಸಮಯದವರೆಗೂ ಅದರ ಸುತ್ತಮುತ್ತ ಹಾರಾಡಿದವು. ಆದರೆ, ಗಾಳಿಪಟಕ್ಕೆ ಮಾತ್ರ ಯಾವುದೇ ಅಪಾಯ ಉಂಟು ಮಾಡಲಿಲ್ಲ. ಕೊನೆಗೆ ತಮ್ಮ ಸಹಪಾಠಿ ಅಲ್ಲ ಎನ್ನುವುದು ಖಚಿತವಾಗುತ್ತಲೇ ಜಾಗ ಖಾಲಿ ಮಾಡಿದವು.
ಹುಲಿ ಆಕಾರದ ಗಾಳಿಪಟ ಎಲ್ಲರಲ್ಲಿ ಕುತೂಹಲ ಮೂಡಿಸಿತು. ವಿಮಾನ, ತಬಲಾ ಮತ್ತಿತರ ವಿಶಿಷ್ಟ ಆಕಾರದ ಗಾಳಿಪಟುಗಳು ಗಮನ ಸೆಳೆದವು.
ಶಾಸಕ ಬಂಡೆಪ್ಪ ಕಾಶೆಂಪೂರ್ ಹಾಗೂ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರು ಪೇಂಚ್ ಸ್ಪರ್ಧೆಗೆ ಸಿದ್ಧರಾಗಿ ಗಾಳಿಪಟಗಳನ್ನು ಹಾರಿಸಿಬಿಟ್ಟಿದ್ದರು. ಆದರೆ, ಪ್ರತಿಕೂಲ ವಾತಾವರಣದಿಂದಾಗಿ ಇವರ ನಡುವೆ ಜುಗಲಬಂದಿ ನಡೆಯಲಿಲ್ಲ.
ಪತಂಗ ಉತ್ಸವದಲ್ಲಿ ಒಟ್ಟು 60 ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಅಂತರರಾಷ್ಟ್ರೀಯ ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸಿರುವ ಬರೋಡಾದ ಅಶೋಕ ಷಾ ಮತ್ತು ತಂಡ, ಹೈದರಾಬಾದ್ ಕೋಹಿನೂರ್ ಕೈಟ್ ಕ್ಲಬ್ನ ಶ್ರೀನಿವಾಸ ಮತ್ತು ತಂಡ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಬೆಳಿಗ್ಗೆ ನಡೆದ ಪತಂಗ ಸ್ಪರ್ಧೆಯಲ್ಲಿ ಶಾಹೀನ್ ಕಾಲೇಜು ವಿದ್ಯಾರ್ಥಿನಿಯರು ಕೂಡ ಭಾಗಿಯಾಗಿದ್ದರು. ಪತಂಗ ಉತ್ಸವದಲ್ಲಿ ಪೇಂಚ್, ಮಹಾಪೇಂಚ್, ಮಹಿಳಾ ಪೇಂಚ್, ಬೆಸ್ಟ್ ಕೈಟ್ ಹಾಗೂ ದೊಡ್ಡ ಗಾಳಿಪಟ ಸ್ಪರ್ಧೆಗಳು ನಡೆಯುತ್ತಿವೆ.
ಶಾಸಕ ಬಂಡೆಪ್ಪ ಕಾಶೆಂಪೂರ್ ಅವರು ಪಾರಿವಾಳ ಹಾರಿಬಿಡುವ ಮೂಲಕ ಪತಂಗ ಉತ್ಸವವನ್ನು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಬುರಾವ್ ಕಾರಬಾರಿ, ಸದಸ್ಯ ಡಾ. ಶೈಲೇಂದ್ರ ಬೆಲ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಜಗದೀಶಚಂದ್ರ ಸ್ವಾಮಿ, ಪತಂಗ ಉತ್ಸವದ ಮುಖ್ಯಸ್ಥ ಡಾ. ಮಕ್ಸೂದ್ ಚಂದಾ, ಡಾ. ಸಿರಾಜ್ ಪಟೇಲ್, ನಬಿ ಖುರೈಶಿ, ದಯಾನಂದರಾವ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.