ADVERTISEMENT

ರೊಚ್ಚಿಗೆದ್ದ ಜನರಿಂದ ಲಾರಿ ಮೇಲೆ ಕಲ್ಲೆಸೆತ

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 9:30 IST
Last Updated 16 ಜೂನ್ 2011, 9:30 IST
ರೊಚ್ಚಿಗೆದ್ದ ಜನರಿಂದ ಲಾರಿ ಮೇಲೆ ಕಲ್ಲೆಸೆತ
ರೊಚ್ಚಿಗೆದ್ದ ಜನರಿಂದ ಲಾರಿ ಮೇಲೆ ಕಲ್ಲೆಸೆತ   

ಭಾಲ್ಕಿ: ಬುಕಿಂಗ್ ಮಾಡಿ ತಿಂಗಳಾದರೂ ಸಿಗದೇ ಇರುವ ಸಿಲೆಂಡರ್‌ನಿಂದಾಗಿ ಬುಧವಾರ ಸಾರ್ವಜನಿಕರ ಸಿಟ್ಟು ಸ್ಪೋಟಗೊಂಡಿದೆ. ಇಲ್ಲಿನ ಸೋನಾ ಭಾರತ ಗ್ಯಾಸ್ ಏಜೆನ್ಸಿ ಕೇಂದ್ರದ ಮುಂದೆ ನೂರಾರು ಜನರು ಗುಂಪು ಗೂಡಿದ್ದರು. ಸಿಲೆಂಡರ್ ಲಾರಿ ಬರುತ್ತಿದ್ದಂತೆಯೇ ಕೆಲವರು ಕಲ್ಲು ತೂರಿದರು.

ತಿಂಗಳಿಗೆ 15 ಲೋಡ್ ಬರುವ ಸಿಲೆಂಡರ್‌ಗಳು ಜನರಿಗೆ ಸರಿಯಾಗಿ ವಿತರಿಸದೇ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ರೊಚ್ಚಿಗೆದ್ದ ಗ್ರಾಹಕರು ಆರೋಪಿಸಿದರು. ಮೂರು ದಿನಗಳಿಂದ ಅಲೆಯುತ್ತಿದ್ದರೂ ಕೊಡುತ್ತಿಲ್ಲ. ಕೆಲವರು ನೊಂದಣಿ ಮಾಡಿಸಿ ಮೂರು ತಿಂಗಳಾಗಿವೆ ಎಂದರು.

ಸರಿಯಾಗಿ ವಿತರಿಸಲು ಆಗದೇ ಇದ್ದರೆ ಏಜೆನ್ಸಿ ಬಿಟ್ಟುಬಿಡಿ ಎಂದು ನಾಗರಾಜ ಖಂಡ್ರೆ ದೂರಿದರು. ಈ ಬಗ್ಗೆ ಈಗಾಗಲೇ ತಹಸೀಲ್ದಾರರಿಗೆ ಹಲವು ಸಲ ದೂರುಗಳನ್ನು ನೀಡಲಾಗಿದೆ. ಆದರೆ ಯಾರೊಬ್ಬರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು.

ಜನರು ಗಲಾಟೆ ಮಾಡುತ್ತಿರುವ ಸುದ್ದಿ ಅರಿತ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ನಿರಂತರ ಮಳೆ ಬೀಳುತ್ತಿದ್ದರೂ ಮಕ್ಕಳು, ಮಹಿಳೆಯರು ಸಿಲೆಂಡರ್ ಹಿಡಿದು ಪರದಾಡುತ್ತಿದ್ದ ದೃಶ್ಯ ಕಂಡು ಬಂತು. ಪೊಲೀಸ್ ಭದ್ರತೆಯಲ್ಲಿ ಬಂದಷ್ಟು ಸಿಲೆಂಡರ್ ಹಂಚಲಾಯಿತಾದರೂ ನೂರಾರು ಗ್ರಾಹಕರು ಬರಿಗೈಲಿ ಗೊಣಗುತ್ತ ವಾಪಸ್ಸಾದರು. ಭಾಲ್ಕಿಯಲ್ಲಿ ಗ್ಯಾಸ್ ವಿತರಣೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿದ್ದು ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.