ADVERTISEMENT

ವೈಭವದ ಹನುಮ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2011, 10:10 IST
Last Updated 19 ಏಪ್ರಿಲ್ 2011, 10:10 IST

ಬೀದರ್:ಬೀದರ್ ಜಿಲ್ಲೆಯ ಚಿಟಗುಪ್ಪಾ ಹಾಗೂ ಹುಮನಾಬಾದ್‌ನಲ್ಲಿ ಸಂಭ್ರಮದ ಹನುಮಾನ್ ಜಯಂತಿ ಆಚರಣೆ ಮಾಡಲಾಯಿತು.

ಚಿಟಗುಪ್ಪಾ ವರದಿ

ಪಟ್ಟಣದ ಭವಾನಿ ಮಂದಿರದ ಆವರಣದಲ್ಲಿಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಸೋಮವಾರ ಶ್ರದ್ಧಾ ಭಕ್ತಿಯಿಂದ ಹನುಮಾನ ಜನ್ಮದಿನ ಆಚರಿಸಲಾಯಿತು.ಬೆಳಿಗ್ಗೆಯಿಂದಲೇ ನೂರಾರು ಹನುಮಾನ ಭಕ್ತರು ದೇವಾಲಯಕ್ಕೆ ಆಗಮಿಸಿ, ದೇವರ ದರ್ಶನ ಪಡೆಯಲು ಸಾಲಿನಲ್ಲಿ ನಿಂತಿದ್ದರು. ಹಲವರು ತಮ್ಮ ಪೂಜಾ ಕ್ರಿಯಾದಿಗಳು ದೇವಾಲಯದ ಆವರಣದಲ್ಲಿ ನಡೆಸುತ್ತಿರುವುದು ಕಂಡುಬಂತು. ಬೆಳಿಗ್ಗೆ ಹನುಮಾನ ದೇವರಿಗೆ ವಿಶೇಷ ಅಭಿಷೇಕ ಪೂಜೆ ನಡೆಸಲಾಯಿತು, ದರ್ಶನಕ್ಕೆ ಆಗಮಿಸಿದ ಹಲವು ಮಾತೆಯರು, ಮಕ್ಕಳು ಸೇರಿ ಪವನ ಪುತ್ರ ಹನುಮಾನನಿಗೆ ತೊಟ್ಟಿಲು ಕಾರ್ಯಕ್ರಮ ನಡೆಸಿಕೊಟ್ಟರು.

ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಹಲವು ಮಹಿಳೆಯರು ಪ್ರಸಾದ ವಿತರಿಸಿದರು. ರಾತ್ರಿ ದೇವರ ನಾಮಸ್ಮರಣೆಗಾಗಿ ವಿವಿಧ ಸಂಗೀತ ಕಲಾವಿದರಿಂದ ಭಜನ ಸಂಗೀತ ಕಾರ್ಯಕ್ರಮ ನಡೆಯಿತು.

ಹನುಮಾನ ಲಂಕಾ: ರಾಷ್ಟ್ರೀಯ ಹೆದ್ದಾರಿ 9 ರಮೇಲಿರುವ ನಿರ್ಣಾ ಕ್ರಾಸ್ ಹತ್ತಿರದ ಹನುಮಾನ ಲಂಕಾದಲ್ಲಿಯೂ ರೇಕುಳಗಿ, ಮನ್ನಾ ಏಖ್ಖೇಳಿ ಅಕ್ಕ ಪಕ್ಕದ ಗ್ರಾಮಗಳ ಭಕ್ತರಿಂದ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆದವು.

ಬೇಮಳಖೇಡಾ: ಹುಮನಾಬಾದ್ ತಾಲ್ಲೂಕಿನ ಬೇಮಳಖೇಡಾ ಗ್ರಾಮದಲ್ಲಿಯ ಹನುಮಾನ ಮಂದಿರದಲ್ಲಿ ಭವ್ಯವಾಗಿ ಹನುಮಾನ ದೇವರ ಜನ್ಮದಿನಾಚರಣೆ ನಡೆಯಿತು. ಗ್ರಾಮದ ಮುಖ್ಯ ಬೀದಿಗಳಲ್ಲಿ ದೇವರ ಪಲ್ಲಕ್ಕಿ ಉತ್ಸವ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು.

ಹುಮನಾಬಾದ್ ವರದಿ

ಹನುಮ ಜಯಂತಿ ಅಂಗವಾಗಿ ಪಟ್ಟಣದ ಬೈರಾಗಿ ಹನುಮ ದೇವಸ್ಥಾನದಲ್ಲಿ ಸೋಮವಾರ ಸಹಸ್ರಾರು ಭಕ್ತರು ದೇವರ ದರ್ಶನ ಪಡೆದು ಕೃತಾರ್ಥರಾದರು.ದಕ್ಷಿಣಾಭಿಮುಖ ಹನುಮ ಭಕ್ತರ ಇಷ್ಠಾರ್ಥ ಪೂರೈಸುತ್ತಾನೆ ಎಂಬ ನಂಬಿಕೆ ಇರುವುದರಿಂದ ಬೀದರ್- ಗುಲ್ಬರ್ಗ ಮಾತ್ರವಲ್ಲದೇ ಆಂಧ್ರ ಮಹಾರಾಷ್ಟ್ರ ರಾಜ್ಯಗಳಿಂದಲೂ ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಬಂದ ದರ್ಶನ ಪಡೆಯುತ್ತಾರೆ. ಈ ಜನುಮನ ಕೃಪೆಗೆ ಪಾತ್ರರಾದ ಭಕ್ತರ ಬಹುತೇಕ ಇಷ್ಠಾರ್ಥ ಇಡೇರಿವೆ, ದೇವಸ್ಥಾನದಲ್ಲಿ ಕಳೆದ 36ವರ್ಷದಿಂದ ಪೂಜಾಸೇವೆ ಸಲ್ಲಿಸುತ್ತಿರುವ ಪೂಜ್ಯ ಯುವರಾಜಸಿಂಗ್ ಠಾಕೂರ್ ಅವರ ಮೇಲೆ ವಿಶ್ವಾಸವಿಟ್ಟು ಬಂದವರ ಎಲ್ಲ ಇಷ್ಟಾರ್ಥಗಳು ಈಡೇರಿವೆ ಎನ್ನುತ್ತಾರೆ ಸುರೇಶ ನಾಗರೆ, ವೀರಪ್ಪ ತೂಗಾಂವ, ಕಾಳಿದಾಸ್ ಪೇಣೆ, ಬಾಬುರಾವ, ಗೋವಿಂದ ತಿವಾರಿ, ದುರ್ಯೊಧನ ಹೂಗಾರ ಮೊದಲಾದವರು ವಿವರಿಸುತ್ತಾರೆ.

ಕಳೆದ ಮೂರು ವರ್ಷ ಹಿಂದೆ ಕಾಡಿನಂತಿದ್ದ ಸ್ಥಳದಲ್ಲಿ ಈಗ ವಿಶಾಲ ದೇವಾಲಯ ನಿರ್ಮಾಣವಾಗಿದೆ. ಸ್ಥಳೀಯ ಪುರಸಭೆ ಹಾಗೂ ಭಕ್ತರ ಸಹಾಯ ಸಹಕಾರದಿಂದ ಉತ್ತಮ ರಸ್ತೆ, ಮಹಾದ್ವಾರ, ನಿರ್ಮಾಣ ಆಗಿರುವುದು ಮಾತ್ರವಲ್ಲದೇ ಪ್ರತಿ ಶನಿವಾರ ಭಕ್ತರ ದಂಡು ಹರಿದು ಬಂದರೆ ಹನುಮ ಜಯಂತಿ ವೇಳೆ ಜಾತ್ರೆ ಸಂಭ್ರಮ ಇರುತ್ತದೆ. ದರ್ಶನಕ್ಕೆ ಆಗಮಿಸುವ ಸಹಸ್ರಾರು ಭಕ್ತರಿಗಾಗಿ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.