ADVERTISEMENT

‘ಅಂಬಿಗರ ಚೌಡಯ್ಯ ಸ್ಮಾರಕಕ್ಕೆ ₹2 ಕೋಟಿ’

ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 1:51 IST
Last Updated 13 ನವೆಂಬರ್ 2020, 1:51 IST
ಬಸವಕಲ್ಯಾಣದ ಅಂಬಿಗರ ಚೌಡಯ್ಯ ಸ್ಮಾರಕಕ್ಕೆ ಭೇಟಿ ನೀಡಿದ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರಿಗೆ ಕೋಲಿ ಸಮಾಜದಿಂದ ಮನವಿಪತ್ರ ಸಲ್ಲಿಸಲಾಯಿತು
ಬಸವಕಲ್ಯಾಣದ ಅಂಬಿಗರ ಚೌಡಯ್ಯ ಸ್ಮಾರಕಕ್ಕೆ ಭೇಟಿ ನೀಡಿದ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರಿಗೆ ಕೋಲಿ ಸಮಾಜದಿಂದ ಮನವಿಪತ್ರ ಸಲ್ಲಿಸಲಾಯಿತು   

ಬಸವಕಲ್ಯಾಣ: ‘ಇಲ್ಲಿನ ನಿಜಶರಣ ಅಂಬಿಗರ ಚೌಡಯ್ಯ ಸ್ಮಾರಕಕ್ಕೆ ಸರ್ಕಾರ ₹2 ಕೋಟಿ ಮಂಜೂರು ಮಾಡಿದೆ’ ಎಂದು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಹೇಳಿದ್ದಾರೆ.

ಇಲ್ಲಿನ ನಿಜಶರಣ ಅಂಬಿಗರ ಚೌಡಯ್ಯ ಸ್ಮಾರಕಕ್ಕೆ ಅವರು ಗುರುವಾರ ಭೇಟಿ ನೀಡಿದಾಗ ತಾಲ್ಲೂಕು ಕೋಲಿ ಸಮಾಜ ಸಂಘದಿಂದ ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

‘ಹಿಂದುಳಿದ ಕೋಲಿ ಸಮಾಜದ ಉದ್ಧಾರಕ್ಕಾಗಿ ಕಾಂಗ್ರೆಸ್ ಏನೂ ಮಾಡಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಭರವಸೆ ನೀಡಿದ್ದಾರೆ. ಆದ್ದರಿಂದ ಇಲ್ಲಿನ ಉಪ ಚುನಾವಣೆಯಲ್ಲಿ ಕೋಲಿ ಸಮಾಜದ ವರು ಬಿಜೆಪಿಗೆ ಬೆಂಬಲಿಸಬೇಕು. ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದ್ದು, ಅಪ್ಪ-ಮಕ್ಕಳ ಜನತಾ ದಳ ಮುಳುಗುವ ಹಡಗಾಗಿದೆ. ಈಗ ಎಲ್ಲೆಡೆ ಮೋದಿ ಅಲೆ ಇದೆ’ ಎಂದರು.

ADVERTISEMENT

ಕೋಲಿ ಸಮಾಜ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಜಮಾದಾರ ಮಾತನಾಡಿ, ‘ಚೌಡಯ್ಯ ಸ್ಮಾರಕಕ್ಕೆ ಹೆಚ್ಚಿನ ಜಮೀನಿತ್ತು. ಆದರೆ ಅತಿಕ್ರಮಣವಾಗಿ ಈಗ ಕೇವಲ 5 ಎಕರೆ ಮಾತ್ರ ಉಳಿದಿದೆ. ಇದನ್ನು ಸ್ಮಾರಕ ಅಥವಾ ಸಮಾಜದ ಹೆಸರಿಗೆ ಮಾಡಿ ಕೊಡುವುದು ಅತ್ಯಗತ್ಯವಾಗಿದೆ’ ಎಂದು ಆಗ್ರಹಿಸಿದರು.

ಸಮಾಜ ಸಂಘದ ತಾಲ್ಲೂಕು ಅಧ್ಯಕ್ಷ ಈಶ್ವರ ಬೊಕ್ಕೆ ಮನವಿಪತ್ರ ಸಲ್ಲಿಸಿದರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಜಿಲ್ಲಾ ಪಂಚಾಯಿತಿ ಸದಸ್ಯ ಗುಂಡುರೆಡ್ಡಿ ಕಮಲಾಪುರೆ, ವಾಲ್ಮೀಕಿ ಖನಕೋರೆ, ಜಗನ್ನಾಥ ಪಾಟೀಲ ಮಂಠಾಳ, ಸಂಜೀವ ಗಾಯಕವಾಡ, ದಿಗಂಬರ ಜಲ್ದೆ, ಬಸವರಾಜ ಖೂಬಾ, ಸಂಜೀವ ಗೋಡಬೋಲೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.