ಕಮಲನಗರ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ ಕಂಬೈನ್ಡ್ ಮೆಡಿಕಲ್ ಸರ್ವಿಸ್ (ಸಿಎಂಸಿ) ಪರೀಕ್ಷೆಯಲ್ಲಿ ಬಸವರಾಜೇಶ್ವರಿ ಅವರು ರಾಷ್ಟ್ರಮಟ್ಟದಲ್ಲಿ 106ನೇ ರ್ಯಾಂಕ್ ಗಳಿಸಿದ್ದಾರೆ.
ಕಮಲನಗರದ ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್.ಎನ್.ಶಿವಣಕರ ಅವರ ಪುತ್ರಿ ಬಸವರಾಜೇಶ್ವರಿ ಅವರು ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರು ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ್ದಾರೆ.
ಧಾರವಾಡದ ಜೆಎಸ್ಎಸ್ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದ ಅವರು ಬೆಳಗಾವಿಯ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದರು.ಕೇರಳದ ತ್ರಿಸೂರಿನಲ್ಲಿ ಉನ್ನತ ವ್ಯಾಸಾಂಗಕ್ಕಾಗಿ ತರಬೇತಿ ಪಡೆದ ನಂತರ ಗುತ್ತಿಗೆ ಆಧಾರದಲ್ಲಿ ಬೀದರ್ನ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಪತಿ ಡಾ.ಸ್ವಪ್ನಿಲ್ ನೀಲಾ ಅವರೇ ಸ್ಫೂರ್ತಿ. ಅವರು ರೈಲ್ವೆ ಇಲಾಖೆಯಲ್ಲಿ ಐಆರ್ಟಿಎಸ್ ಅಧಿಕಾರಿ ಆಗಿದ್ದಾರೆ.ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಜಿಲ್ಲಾ ಪರಿಷತ್ತಿನ ಮುಖ್ಯಾಧಿಕಾರಿಯಾದ ಧನರಾಜ ನೀಲಾ (ಅತ್ತೆ, ಮಾವ) ಪ್ರೋತ್ಸಾಹಿಸಿದ್ದಾರೆ. ಹೀಗಾಗಿ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ಡಾ. ಬಸವರಾಜೇಶ್ವರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.