ಬಸವಕಲ್ಯಾಣ: ‘ ₹5 ಕೋಟಿ ವೆಚ್ಚದಲ್ಲಿ ಅಂಬಿಗರ ಚೌಡಯ್ಯ ಸಭಾಭವನ ನಿರ್ಮಿಸಲಾಗುವುದು’ ಎಂದು ಶಾಸಕ ಬಿ.ನಾರಾಯಣರಾವ್ ಭರವಸೆ ನೀಡಿದರು.
ತಾಲ್ಲೂಕು ಆಡಳಿತದಿಂದ ಗುರುವಾರ ಇಲ್ಲಿನ ಬಸವಕಲ್ಯಾಣ ಮಂಡಳಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
‘ಅಂಬಿಗ ಸಮಾಜದ ಕಲ್ಯಾಣ ಮಂಟಪಕ್ಕಾಗಿ ತಹಶೀಲ್ದಾರ್ ಅವರು 2 ಎಕರೆ ಜಮೀನು ಒದಗಿಸಬೇಕು. ಸ್ಮಶಾನಭೂಮಿಗೆ 5 ಎಕರೆ ಜಾಗ ನೀಡಬೇಕು. ಸಮಾಜ ಬಾಂಧವರಿಗೆ ವಿವಿಧ ನಿಗಮ, ಮಂಡಳಿಗಳಿಂದ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು ’ ಎಂದರು.
‘ಹಾವೇರಿಯಲ್ಲಿನ ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಜಾತ್ರೆ ನೆರವೇರಿಸಲಾಗುತ್ತಿದೆ. ಈಗಾಗಲೇ ಅಲ್ಲಿನ ವಿಕಾಸಕ್ಕೆ ₹10 ಕೋಟಿ ಸರ್ಕಾರ ಒದಗಿಸಿದ್ದು, ಇನ್ನೂ 3 ವರ್ಷಗಳಲ್ಲಿ ₹50 ಕೋಟಿ ಅನುದಾನ ದೊರೆಯಲು ಪ್ರಯತ್ನಿಸುತ್ತೇನೆ ’ ಎಂದರು.
ಗೋವಿಂದರಾವ್ ಗುರೂಜಿ ಮಾತನಾಡಿ, `ಚೌಡಯ್ಯನವರು 10 ಸಾವಿರ ವಚನಗಳನ್ನು ರಚಿಸಿದ್ದಾರೆಂಬ ದಾಖಲೆ ದೊರೆತರೂ ನೂರಾರು ವಚನಗಳು ಮಾತ್ರ ಲಭ್ಯವಾಗಿವೆ’ ಎಂದರು.
ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ, ಶಿವಕುಮಾರ ಜಡಗೆ ಮಾತನಾಡಿದರು.
ಚೌಡಯ್ಯ ಪೀಠದ ರತ್ನಾಕಾಂತ ಸ್ವಾಮೀಜಿ, ಪೌರಾಯುಕ್ತ ಸುರೇಶ ಬಬಲಾದ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ್, ಟೋಕರಿ ಕೋಲಿ ಸಮಾಜ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಈಶ್ವರ ಬೊಕ್ಕೆ, ನಾಗಪ್ಪ ಚಾಮಾಲೆ, ಗೋವಿಂದ ಚಾಮಾಲೆ, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಬೊಕ್ಕೆ, ರಾಮಣ್ಣ ಮಂಠಾಳೆ, ಶಂಕರರಾವ್ ಜಮಾದಾರ, ಶಿವರಾಜ ಜಮಾದಾರ, ಚನ್ನವೀರ ಜಮಾದಾರ, ಕೆ.ಜಿ.ಶರಣಪ್ಪ, ಬಾಬು ಕ್ಯಾಶೆ, ನೀಲಕಂಠ ಏಕಂಬೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.