ಬೀದರ್: ‘ಕೊಳಕು ಕೈಗಳಿಂದ ಆಹಾರ ಸೇವಿಸುತ್ತಿರುವ ಕಾರಣದಿಂದಲೇ ಸೋಂಕು ತಗುಲಿ 50 ಬಗೆಯ ಕಾಯಿಲೆಗಳು ಬರುತ್ತಿವೆ. ಇದೇ ಕಾರಣಕ್ಕಾಗಿಯೇ ಹೊಟ್ಟೆಯಲ್ಲಿ ಜಂತುಗಳು ಸಹ ಬೆಳೆಯುತ್ತಿವೆ. ಇದು ವ್ಯಕ್ತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ’ ಎಂದು ಜಿಲ್ಲಾ ತಾಯಿ, ಮಕ್ಕಳ ಆರೋಗ್ಯ ಅಧಿಕಾರಿ ಡಾ.ರವೀಂದ್ರ ಸಿರಸಗೆ ಹೇಳಿದರು.
‘ಬಯಲು ಶೌಚ ಅನೇಕ ಬಗೆಯ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಮಾನವ ದೇಹದಲ್ಲಿ ಕೇವಲ ಒಂದು ಪರಾವಲಂಬಿ ಜೀವಿ ಬೆಳೆಯುತ್ತದೆ. ಮನೆಯ ವಸ್ತುಗಳ ಮೂಲಕ ಹರಡುತ್ತದೆ’ ಎಂದು ಇಲ್ಲಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
‘ಪದೇ ಪದೇ ಮೂಗನ್ನು ಹಿಡಿದುಕೊಳ್ಳುವುದು, ಉಗುಳನ್ನು ಹಚ್ಚಿ ನೋಟುಗಳನ್ನು ಎಣಿಸುವುದು, ಕಣ್ಣನ್ನು ಉಜ್ಜಿಕೊಳ್ಳುವುದು ಅಪಾಯಕಾರಿ. ಅದೇ ಕೈಯಿಂದ ಆಹಾರ ಸೇವನೆ ಮಾಡುವುದರಿಂದ ಟಿಬಿ, ಕಾಮಾಲೆ, ಜೀರ್ಣಾಂಗದ ಅಲ್ಸರ್, ಕರುಳು ಬೇನೆ ಹಾಗೂ ವಾಂತಿ ಭೇದಿಯಂತಹ ಸಾಂಕ್ರಾಮಿಕ ರೋಗಗಳು ಬರುತ್ತವೆ. ಮಿದುಳು ರೋಗ, ಮೂತ್ರನಾಳದ ಸೋಂಕು, ಶ್ವಾಸಕೋಶ ಹಾಗೂ ಚರ್ಮ ಸಂಬಂಧಿ ಕಾಯಿಲೆಗಳೂ ಹರಡುತ್ತ ವೆ’ ಎಂದು ಹೇಳಿದರು.
‘ಕೈ ತೊಳೆಯದೆ ಊಟ ಮಾಡಿದರೆ ಕರುಳು ಸೀಮಿತವಾದ ರೋಗಗಳಾದ ವಾಂತಿ, ಭೇದಿ, ಕಾಲರಾ, ಹೊಟ್ಟೆ ನೋವು ಸಹ ಬರುತ್ತದೆ. ಆದ್ದರಿಂದ ಊಟಕ್ಕೆ ಮೊದಲು ಹಾಗೂ ಶೌಚದ ನಂತರ ಕೈಗಳನ್ನು ಸಾಬೂನಿನಿಂದ ಶುಭ್ರವಾಗಿ ತೊಳೆದುಕೊಳ್ಳಬೇಕು’ ಎಂದು ತಿಳಿಸಿದರು.
ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಉಮೇಶ ಬಿರಾದಾರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುಭಾಷ ಮುಧಾಳೆ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.