ಭಾಲ್ಕಿ: ‘ಜಿಲ್ಲೆಯಲ್ಲಿ ಹಿಂದೆ ಹುಮನಾಬಾದ್ ಮಾರ್ಗವಾಗಿ ಒಂದು ರಾಷ್ಟ್ರೀಯ ಹೆದ್ದಾರಿ ಮಾತ್ರ ಇತ್ತು. ಈಗ ಜಿಲ್ಲೆಯಲ್ಲಿ 12 ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಟೆಂಡರ್ ಆಗಿದೆ’ ಎಂದು ಸಂಸದ ಭಗವಂತ ಖೂಬಾ ಹೇಳಿದರು. ಇಲ್ಲಿಯ ಚನ್ನಬಸವಾಶ್ರಮದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಹೆದ್ದಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ಬೀದರ್– ಔರಾದ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಭರವಸೆ ನೀಡಿದ್ದರು. ಆದರೆ ಒಂದು ಇಂಚು ರಸ್ತೆ ನಿರ್ಮಿಸಲಿಲ್ಲ. ಧರ್ಮಸಿಂಗ್ ಅವಧಿಯಲ್ಲೂ ಹೆದ್ದಾರಿ ನಿರ್ಮಾಣ ಆಗಿಲ್ಲ’ ಎಂದು ತಿಳಿಸಿದರು.
‘ರಸ್ತೆ ಅಭಿವೃದ್ಧಿಯಿಂದ ಮಾತ್ರ ದೇಶದ ತ್ವರಿತ ಎಳಿಗೆ ಸಾಧ್ಯ ಎಂದು ಬಲವಾಗಿ ನಂಬಿರುವ ಹೆದ್ದಾರಿಗಳ ಸಚಿವ ಗಡ್ಕರಿ ಅವರು ದೇಶದ ಎಲ್ಲ ರಾಜ್ಯಗಳ ಸಂಸದರ ಕ್ಷೇತ್ರಗಳಲ್ಲೂ ಪಕ್ಷ ಭೇದವಿಲ್ಲದೆ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುತ್ತಿದ್ದಾರೆ. ಅವರ ಕಾರ್ಯಗಳನ್ನು ವಿರೋಧ ಪಕ್ಷದವರೂ ಮೆಚ್ಚಿದ್ದಾರೆ’ ಎಂದು ಹೇಳಿದರು. ಇದೇ ಸಂದರ್ಭದಲ್ಲಿ 2018–19ನೇ ಸಾಲಿನ ಕೇಂದ್ರ ಬಜೆಟ್ನ ಮುಖ್ಯಾಂಶಗಳನ್ನು ಒಳಗೊಂಡ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.