ಹುಮನಾಬಾದ್: ಸುತ್ತಮುತ್ತಲು ಗುಡ್ಡಗಾಡು ಮತ್ತು ನಿಸರ್ಗದ ಹಸಿರಿನ ಸೊಬಗಿನಿಂದ ಕೂಡಿರುವ ತಾಲ್ಲೂಕಿನ ಹಳ್ಳಿಖೇಡ್ (ಕೆ) ಗ್ರಾಮವು ತನ್ನದೇ ಆದ ವಿಶೇಷತೆ ಹೊಂದಿದೆ.
ಗಡಿ ಭಾಗದಲ್ಲಿ ಬೀದರ್ – ಕಲಬುರ್ಗಿ ರಸ್ತೆಗೆ ಹೊಂದಿಕೊಂಡಿರುವ ಈ ಕೆ. ಗ್ರಾಮದಲ್ಲಿ ಬೃಹತ್ ಕೈಲಾಸನಾಥೇಶ್ವರ (ಶಿವನ) ಮೂರ್ತಿ ಇದೆ. ಗ್ರಾಮದ ಹೊರವಲಯದಲ್ಲಿರುವ ಕೆರೆ, ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಬೆಟ್ಟದ ಮೇಲಿನ 12ನೇ ಶತಮಾನದ ಶರಣ ಕಿನ್ನರಿ ಬೊಮ್ಮಯ್ಯನವರ ದೇವಸ್ಥಾನ ಮೆರಗು ಹೆಚ್ಚಿಸಿವೆ.
ಗುಡ್ಡಗಾಡು ಆವರಿಸಿಕೊಂಡಿರುವ ಈ ಗ್ರಾಮದಲ್ಲಿ ಸುಂದರ ಮನೆಗಳು, ಸರ್ಕಾರಿ ಶಾಲೆ ಸೇರಿದಂತೆ ಸೇರಿದಂತೆ ಸೌಲಭ್ಯಗಳನ್ನು ಹೊಂದಿದೆ.
ಪ್ರತಿ ಶ್ರಾವಣ ಮಾಸದ ಮಧ್ಯೆ ಸೋಮವಾರ ಶರಣ ಕಿನ್ನರಿ ಬೊಮ್ಮಯ್ಯನವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗುತ್ತದೆ. ಅದ್ಧೂರಿ ರಥೋತ್ಸವ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳು ವಿಶೇಷವಾಗಿ ನಡೆಯುತ್ತವೆ. ಅಲ್ಲದೆ ಪ್ರತಿ ಮಹಾಶಿವರಾತ್ರಿಯಂದು ನಡೆಯುವ ಕೈಲಾಸನಾಥೇಶ್ವರ ಜಾತ್ರಾ ಮಹೋತ್ಸವದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಹಲವಾರು ಸಾಂಸ್ಕೃತಿಕ ಕಲಾ ತಂಡಗಳ ಕಲರವವೂ ಇರುತ್ತದೆ.
ಈ ಎರಡು ಜಾತ್ರೆಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜತೆಗೆ ಬೀದರ್ ಮತ್ತು ಕಲಬುರ್ಗಿ ಜಿಲ್ಲೆಯ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆಯುತ್ತಾರೆ. ಗ್ರಾಮದ ಸ್ವಲ್ಪ ಅಂತರದಲ್ಲೇ ಬೀದರ್–ಕಲಬುರ್ಗಿ ರಸ್ತೆಗೆ ಹೊಂದಿಕೊಂಡಿರುವ ಕೆರೆಯ ಅಭಿವೃದ್ಧಿ ಜತೆಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಬೋಟಿಂಗ್ ವ್ಯವಸ್ಥೆ ಮಾಡುವ ಉದ್ದೇಶವಿದೆ.
ಮುಂದಿನ ದಿನಗಳಲ್ಲಿ ಗ್ರಾಮದ ಸೊಬಗು ಮತ್ತಷ್ಟು ಹೆಚ್ಚಲಿದೆ. ಒಟ್ಟಿನಲ್ಲಿ ಬೀದರ್ ಕಲಬುರ್ಗಿ ಸೇರಿದಂತೆ ತೆಲಂಗಾಣ ಹಾಗೂ ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಗ್ರಾಮದಿಂದ ಹಾದು ಹೋಗಿರುವ ಈ ಪ್ರಮುಖ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ದೇವರ ದರ್ಶನದ ಜತೆಗೆ ಕೆರೆ, ಸುತ್ತಮುತ್ತಲ ಹಸಿರಿನ ನಿಸರ್ಗದಿಂದ ಕೂಡಿರುವ ಬೆಟ್ಟ ಗುಡ್ಡಗಳು ಕಣ್ಣಿಗೆ ಮುದ ನೀಡುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.