ADVERTISEMENT

10 ಸಾವಿರ ಪ್ರಕರಣಗಳ ಇತ್ಯರ್ಥಕ್ಕೆ ಗುರಿ: ರಾಷ್ಟ್ರೀಯ ಲೋಕ ಅದಾಲತ್ ನ.12ಕ್ಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 13:43 IST
Last Updated 30 ಸೆಪ್ಟೆಂಬರ್ 2022, 13:43 IST
ಬಸವರಾಜ ಚೇಗರೆಡ್ಡಿ
ಬಸವರಾಜ ಚೇಗರೆಡ್ಡಿ   

ಬೀದರ್‌: ‘ನವೆಂಬರ್ 12 ರಂದು ಜಿಲ್ಲೆಯಲ್ಲಿ ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 10 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾಯಾಧೀಶ ಬಸವರಾಜ ಚೇಗರೆಡ್ಡಿ ಹೇಳಿದರು.

ವಿಶೇಷವಾಗಿ ಚೆಕ್ ಬೌನ್ಸ್, ಎಲ್.ಐ.ಸಿ. ಹಣ ವಸೂಲಿಯಂತಹ ಪ್ರಕರಣಗಳ ಹೆಚ್ಚಿನ ವಿಲೇವಾರಿ ಮಾಡಲು ಉದ್ದೇಶಿಸಲಾಗಿದೆ ಎಂದು ಪ್ರಾಧಿಕಾರದ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ಲೋಕ ಅದಾಲತ್‌ನಲ್ಲಿ 13974 ಪ್ರಕರಣಗಳ ಪೈಕಿ 11813 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ ₹ 86,169,387 ರಾಜಿ ಮಾಡಲಾಗಿದೆ. ಈ ಬಾರಿಯ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಲು ತೀರ್ಮಾನಿಸಲಾಗಿದೆ. ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ನಡೆದ ಮೂರು ಲೋಕ ಅದಾಲತ್‌ದಲ್ಲಿ 24,465 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದರು.

ADVERTISEMENT

ಈ ಬಾರಿಯ ಲೋಕ ಅದಾಲತ್‌ನಲ್ಲಿ ಬ್ಯಾಂಕ್ ವಸೂಲಾತಿ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಹಾಗೂ ನೀರಿನ ಮತ್ತು ತೆರಿಗೆ ಶುಲ್ಕಗಳ ಪ್ರಕರಣಗಳು, ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು, ವೈವಾಹಿಕ ಮತ್ತು ಇತರೆ ಸಿವಿಲ್ ವ್ಯಾಜ್ಯಗಳು, ಕ್ರಿಮಿನಲ್ ರಾಜಿಯಾಗಬಹುದಾದ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಕಾರ್ಮಿಕ ವಿವಾದ ಪ್ರಕರಣಗಳು, ಮೋಟರ್ ವಾಹನ ಅಪಘಾತಗಳಲ್ಲಿ ಗಾಯಗೊಂಡವರು ಅಥವಾ ಮೃತಪಟ್ಟವರ ವಾರಸುದಾರರ ಅಥವಾ ಅವಲಂಬಿತರು ಪರಿಹಾರಧನ ಕೋರಿ ಸಲ್ಲಿಸಲಾದ ಪ್ರಕರಣಗಳು, ವೈವಾಹಿಕ ವಿವಾದಗಳು ಮತ್ತು ಜೀವನಾಂಶದ ಪ್ರಕರಣಗಳು, ಭೂ ಸ್ವಾಧೀನ ಸಂಬಂಧ ಸರ್ಕಾರದಿಂದ ಪರಿಹಾರಧನ ಕೋರಿ ಸಲ್ಲಿಸಲಾದ ಪ್ರಕರಣಗಳು, ಕಂದಾಯ ಪ್ರಕರಣಗಳು, ಇತರೆ ಸಿವಿಲ್ ಪ್ರಕರಣಗಳ ಇತ್ಯರ್ಥ ಮಾಡಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಇರುತ್ತದೆ ಎಂದು ಹೇಳಿದರು.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಕೆ. ಕನಕಟ್ಟೆ ಮಾತನಾಡಿ,‘ಈಗಾಗಲೇ ನಗರಸಭೆ, ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಲೋಕ ಅದಾಲತ್ ಕುರಿತು ಪ್ರಚಾರ ಮಾಡಲಾಗಿದೆ. ಮಾಧ್ಯಮದವರೂ ಹೆಚ್ಚಿನ ಪ್ರಚಾರ ನೀಡಬೇಕು’ ಎಂದು ಮನವಿ ಮಾಡಿದರು.

ಪ್ರಧಾನ ಕೌಟುಂಬಿಕ ನ್ಯಾಯಾಧೀಶ ಸಚಿನ್ ಕೌಶಿಕ್, ಮುಖ್ಯ ನ್ಯಾಯಿಕ ದಂಡಾಧಿಕಾರಿ ಗಂಗಾಧರ ಹಡಪದ, ಒಂದನೇ ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಅಬ್ದುಲ್ ಖಾದರ್, ಪ್ರಧಾನ ಸಿವಿಲ್ ನ್ಯಾಯಾಧೀಶ ರಾಮಮೂರ್ತಿ ಎನ್, ಸಿವಿಲ್ ನ್ಯಾಯಾಧೀಶ ಪ್ರಭು ಬಡಿಗೇರ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಂ.ಡಿ.ಸಾಯಿಜ್ ಚೌತಾಯಿ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.