ADVERTISEMENT

ಅಕ್ಕ ಅನ್ನಪೂರ್ಣತಾಯಿ ಐಕ್ಯ ಮಂಟಪ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 15:57 IST
Last Updated 24 ಸೆಪ್ಟೆಂಬರ್ 2024, 15:57 IST
ಬೀದರ್‌ನ ಬಸವಗಿರಿಯಲ್ಲಿ ಸೋಮವಾರ ಸಂಜೆ ಉದ್ಘಾಟನೆಗೊಂಡ ಅಕ್ಕ ಅನ್ನಪೂರ್ಣತಾಯಿ ಅವರ ಐಕ್ಯ ಮಂಟಪ
ಬೀದರ್‌ನ ಬಸವಗಿರಿಯಲ್ಲಿ ಸೋಮವಾರ ಸಂಜೆ ಉದ್ಘಾಟನೆಗೊಂಡ ಅಕ್ಕ ಅನ್ನಪೂರ್ಣತಾಯಿ ಅವರ ಐಕ್ಯ ಮಂಟಪ   

ಬೀದರ್: ನಗರದ ಬಸವಗಿರಿಯಲ್ಲಿ ನೂತನವಾಗಿ ನಿರ್ಮಿಸಿರುವ ಅಕ್ಕ ಅನ್ನಪೂರ್ಣತಾಯಿ ಅವರ ಸುಂದರ ಐಕ್ಯ ಮಂಟಪವನ್ನು ಸೋಮವಾರ ಸಂಜೆ ಭಕ್ತ ಸಮೂಹದ ಮಧ್ಯೆ ಉದ್ಘಾಟಿಸಲಾಯಿತು. 

ಅಕ್ಕನವರ ಗದ್ದುಗೆ ಮೇಲೆ ಲಿಂಗಾಯತ ಧರ್ಮಗ್ರಂಥವನ್ನು ಇರಿಸಿ ಗೌರವ ಸಲ್ಲಿಸಲಾಯಿತು. ಆನಂತರ ಅಕ್ಕನವರ ಯೋಗಾಂಗ ತ್ರಿವಿಧಿ ಪಠಿಸಿ, ವಚನಗಳನ್ನು ಸಾಮೂಹಿಕವಾಗಿ ಓದಿ, ಜ್ಯೋತಿ ಬೆಳಗಿಸಿ, ಬಸವ ಜಯ ಘೋಷ ಹಾಕಿದರು.

ಐಕ್ಯ ಮಂಟಪ ಉತ್ತಮ ರೀತಿಯಲ್ಲಿ ನಿರ್ಮಿಸಲಾಗಿದೆ. ಉದ್ಘಾಟನೆ ವಿಧಿ-ವಿಧಾನಗಳನ್ನು ತಾತ್ವಿಕವಾಗಿ ಯೋಜಿಸಲಾಗಿದೆ ಎಂದು ಕಾರ‍್ಯಕ್ರಮ ಉದ್ಘಾಟಿಸಿದ ಹುಲಸೂರಿನ ಶಿವಾನಂದ ಸ್ವಾಮೀಜಿ ಹೇಳಿದರು.

ADVERTISEMENT

ಅಕ್ಕ ಬಸವ ಧರ್ಮದ ಮರೆಯಲಾಗದ ಮಾಣಿಕ್ಯ. ಆಕಾಶದೆತ್ತರಕ್ಕೆ ಬೆಳೆದ ಪ್ರತಿಭೆ. ಅವರ ವಾಣಿಯಲ್ಲಿ ದೈವಿಶಕ್ತಿ ಇತ್ತು ಎಂದು ಸ್ಮರಿಸಿದರು.

ಪ್ರಭುದೇವ ಸ್ವಾಮೀಜಿ ಮಾತನಾಡಿ, ಅಕ್ಕ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲೆಂದೇ 770 ಪ್ರವಚನಗಳ ಸಂಕಲ್ಪ ತೊಡಲಾಗಿದೆ ಎಂದು ಹೇಳಿದರು.

ಹುಮನಾಬಾದ್‍ ಬಸವ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಎಸ್.ಆರ್. ಮಠಪತಿ, ಸಿದ್ರಾಮಪ್ಪ ಕಪಲಾಪುರೆ, ಎಂಜಿನಿಯರ್ ಹಾವಶೆಟ್ಟಿ ಪಾಟೀಲ, ಕಲಬುರಗಿಯ ಬಸವ ಸೇವಾ ಪ್ರತಿಷ್ಠಾನದ ಮನೋಹರ ಜೀವಣಗಿ, ರಮೇಶ ಮಠಪತಿ, ಚನ್ನಬಸವ ಹಂಗರಗಿ ಹಾಜರಿದ್ದರು.

ನೀಲಮ್ಮನ ಬಳಗದ ಸಹೋದರಿಯರು ಪ್ರಾರ್ಥನೆ ನಡೆಸಿಕೊಟ್ಟರು. ನಿರ್ಮಲಾ ಚಂದ್ರಶೇಖರ ಹಂಗರಗಿ ಗುರು ಪೂಜೆ ನೆರವೇರಿಸಿದರು. ಪರುಷಕಟ್ಟೆಯ ಚನ್ನಬಸವಣ್ಣ ಹಾಗೂ ರೇವಣಪ್ಪ ಮೂಲಗೆ ವಚನ ಗಾಯನ ಮಾಡಿದರು. ಕದಳಿಶ್ರೀ ವಚನ ನೃತ್ಯ ಸಭಿಕರ ಮನ ಸೆಳೆಯಿತು. ಎಂಜಿನಿಯರ್‌ಗಳಾದ ಪ್ರಕಾಶ ಮಠಪತಿ, ಆನಂದ ವಡ್ಡನಕೇರಿ, ಆಹಾರ ಇಲಾಖೆಯ ಉಪನಿರ್ದೇಶಕ ಪ್ರವೀಣ್ ಬರಗಲ್ ಅವರನ್ನು ಸನ್ಮಾನಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.