ಬಸವಕಲ್ಯಾಣ: ‘ಅಕ್ಕ ಮಹಾದೇವಿ ಶರಣೆ ಮಾತ್ರವಲ್ಲ, ಧೈರ್ಯದ ಪ್ರತೀಕ’ ಎಂದು ಶರಣ ಹರಳಯ್ಯ ಗವಿಯ ಡಾ.ಗಂಗಾಂಬಿಕಾ ಅಕ್ಕ ಹೇಳಿದರು.
ನಗರದ ಬಂದವರ ಓಣಿಯಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಕ್ಕಮಹಾದೇವಿ ಅನುಭಾವ ಪೀಠದಿಂದ ಈಚೆಗೆ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಕ್ಕನ ಸಂದೇಶ ಹಾಗೂ ಆದರ್ಶದ ಪಾಲನೆಯಿಂದ ಜೀವನದಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ. ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸುವ ಶಕ್ತಿ ಬರುತ್ತದೆ. ಒಬ್ಬ ರಾಜನನ್ನು ಎದುರಿಸಿ ಅಕ್ಕ ಕಲ್ಯಾಣ ನಾಡಿಗೆ ಬಂದರು. ಇದು ಅವರಲ್ಲಿನ ಅಪಾರ ಆತ್ಮವಿಶ್ವಾಸ ತೋರಿಸುತ್ತದೆ. ಸ್ತ್ರೀ ಅಬಲೆಯಲ್ಲ ಸಬಲೆ, ಮಹಾಶಕ್ತಿವಂತೆ ಎನ್ನುವುದನ್ನು ತೋರಿಸುತ್ತದೆ’ ಎಂದರು.
ಶರಣೆ ಗಾಯತ್ರಿತಾಯಿ ಮಾತನಾಡಿ, ‘ಮಹಿಳೆ ಸಹ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಬಹುದು ಎಂಬುದನ್ನು ಅಕ್ಕಮಹಾದೇವಿ ತೋರಿಸಿಕೊಟ್ಟರು' ಎಂದರು.
ಬಸವೇಶ್ವರ ದೇವಸ್ಥಾನ ಪಂಚ ಸಮಿತಿ ನಿರ್ದೇಶಕಿ ವಿಜಯಲಕ್ಷ್ಮಿ ಗಡ್ಡೆ, ತಹಶೀಲ್ದಾರ್ ಸಾವಿತ್ರಿ ಸಲಗರ, ಸತ್ಯಕ್ಕತಾಯಿ, ಶ್ರೀದೇವಿ ಕಾಕನಾಳೆ, ಜಯಶ್ರೀ ಬಿರಾದಾರ, ಕಲ್ಯಾಣಮ್ಮ ಮಾತನಾಡಿದರು.
ಧರ್ಮಸೇವೆಗೈದ ಹಿರಿಯರಾದ ಲಕ್ಷ್ಮಿಬಾಯಿ ಪಾಟೀಲ, ರತ್ನಮ್ಮ ಔಸೆ, ಪುಷ್ಪಾವತಿ ದುರ್ಗೆ, ಸುಲೋಚನಾ ಮಾಮಾ, ಸರಸ್ವತಿ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ ನಿರ್ಮಲಾ ಶಿವಣಕರ್, ಹರಳಯ್ಯ ಸಮಾಜದ ಮೀನಾ ಜಾಧವ
ಇದ್ದರು.
ಇದಕ್ಕೂ ಮುನ್ನ ಅಕ್ಕನ ಭಾವಚಿತ್ರದ ಮೆರವಣಿಗೆ ನಡೆಯಿತು. ಅಕ್ಕನ ಬಳಗ, ಬನಶಂಕರಿ ಬಳಗ, ನೀಲಮ್ಮನ ಬಳಗ ಬಸವಕಲ್ಯಾಣ ಹಾಗೂ ಪ್ರತಾಪುರ ಅವರಿಂದ ವಚನ ಭಜನೆ ಜರುಗಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.