ADVERTISEMENT

ಆನೆಕಾಲು ರೋಗ ನಿರ್ಮೂಲನೆ: ಡಿಇಸಿ ಮಾತ್ರೆ ತಪ್ಪದೆ ಸೇವಿಸಿ–ಭಾರತಬಾಯಿ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2018, 15:16 IST
Last Updated 24 ಸೆಪ್ಟೆಂಬರ್ 2018, 15:16 IST
ಬೀದರ್‌ನಲ್ಲಿ ಸೋಮವಾರ ನಡೆದ ಆನೆಕಾಲು ರೋಗ ನಿರ್ಮೂಲನೆಗಾಗಿ ಹೆಚ್ಚುವರಿ ಸುತ್ತಿನ ಸಾಮೂಹಿಕ ಮಾತ್ರೆ ಸೇವನೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಸಂಸದ ಭಗವಂತ ಖೂಬಾ ಹಾಗೂ ಡಿಎಚ್‍ಒ ಡಾ. ಎಂ.ಎ. ಜಬ್ಬಾರ್ ಮಾತ್ರೆ ಸೇವಿಸಿದರು
ಬೀದರ್‌ನಲ್ಲಿ ಸೋಮವಾರ ನಡೆದ ಆನೆಕಾಲು ರೋಗ ನಿರ್ಮೂಲನೆಗಾಗಿ ಹೆಚ್ಚುವರಿ ಸುತ್ತಿನ ಸಾಮೂಹಿಕ ಮಾತ್ರೆ ಸೇವನೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಸಂಸದ ಭಗವಂತ ಖೂಬಾ ಹಾಗೂ ಡಿಎಚ್‍ಒ ಡಾ. ಎಂ.ಎ. ಜಬ್ಬಾರ್ ಮಾತ್ರೆ ಸೇವಿಸಿದರು   

ಬೀದರ್: ‘ಜಿಲ್ಲೆಯನ್ನು ಆನೆಕಾಲು ರೋಗಮುಕ್ತಗೊಳಿಸಲು ಪ್ರತಿಯೊಬ್ಬರು ತಪ್ಪದೆ ಡಿಇಸಿ ಹಾಗೂ ಅಲ್ಬೆಂಡಾಜೋಲ್ ಮಾತ್ರೆ ಸೇವಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಹೇಳಿದರು.

ನಗರದ ಸರ್ಕಾರಿ ನರ್ಸಿಂಗ್ ಸ್ಕೂಲ್‌ನಲ್ಲಿ ಸೋಮವಾರ ಸ್ವತಃ ಮಾತ್ರೆ ಸೇವಿಸಿ ಆನೆಕಾಲು ನಿರ್ಮೂಲನೆಗಾಗಿ ಹೆಚ್ಚುವರಿ ಸುತ್ತಿನ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಈವರೆಗೆ ನಡೆದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನ ಔಷಧಿ ಸೇವಿಸದೆ ಇರುವುದು ಬೇಸರದ ಸಂಗತಿಯಾಗಿದೆ’ ಎಂದು ತಿಳಿಸಿದರು.
‘ಈ ಬಾರಿಯ ಕಾರ್ಯಕ್ರಮದಲ್ಲಿ ಅರ್ಹರು ತರಬೇತಿ ಹೊಂದಿದ ಸಿಬ್ಬಂದಿಯ ಸಮ್ಮುಖದಲ್ಲೇ ಮಾತ್ರೆಗಳನ್ನು ನುಂಗಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಶಕ್ತಿಮೀರಿ ಪ್ರಯತ್ನಿಸಬೇಕು’ ಎಂದು ಹೇಳಿದರು.

ADVERTISEMENT

ಸಂಸದ ಭಗವಂತ ಖೂಬಾ ಮಾತನಾಡಿ, ‘5 ರಿಂದ 7 ಸುತ್ತಿನ ಡಿಇಸಿ ಹಾಗೂ ಅಲ್ಬೆಂಡಾಜೋಲ್ ಮಾತ್ರೆ ಸಾಮೂಹಿಕ ಸೇವನೆ ಕಾರ್ಯಕ್ರಮದ ಮೂಲಕ ಆನೆಕಾಲು ರೋಗ ನಿರ್ಮೂಲನೆ ಮಾಡಬಹುದಾಗಿದೆ. ಆದರೆ, ಜಿಲ್ಲೆಯಲ್ಲಿ 14 ಸುತ್ತಿನ ಕಾರ್ಯಕ್ರಮ ನಡೆದರೂ ಗುರಿ ಸಾಧನೆಯಾಗಿಲ್ಲ’ ಎಂದು ಸಂಸದ ಭಗವಂತ ಖೂಬಾ ಅಸಮಾಧಾನ ವ್ಯಕ್ತಪಡಿಸಿದರು.

‘ಉಡುಪಿ, ಮಂಗಳೂರು, ಕಾರವಾರ ಮಾದರಿಯಲ್ಲಿ ಜಿಲ್ಲೆಯಲ್ಲಿ ಆನೆಕಾಲು ರೋಗ ಹರಡುವಿಕೆಯನ್ನು ತಡೆಗಟ್ಟಲು ಎಲ್ಲರೂ ಕಡ್ಡಾಯವಾಗಿ ಊಟದ ನಂತರ ಡಿಇಸಿ ಹಾಗೂ ಅಲ್ಬೆಂಡಾಜೋಲ್ ಮಾತ್ರೆ ಸೇವಿಸಬೇಕು’ ಎಂದು ಹೇಳಿದರು.

ಜಿಲ್ಲಾ ನೋಡಲ್ ಅಧಿಕಾರಿ ಡಾ. ಪ್ರೇಮಾನಂದ, ‘ಜಿಲ್ಲೆಯಲ್ಲಿ ಹೆಚ್ಚುವರಿ ಸುತ್ತಿನ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮದ ಮುಂಚೆಯ ಹಾಗೂ ನಂತರದ ಬೆಳವಣಿಗೆಗಳ ಸಂಪೂರ್ಣ ವಿವರ ಕಲೆ ಹಾಕಿ ಜಿಲ್ಲೆಯನ್ನು ಆನೆಕಾಲು ರೋಗ ಮುಕ್ತವಾಗಿಸುವ ದಿಸೆಯಲ್ಲಿ ಜಿಲ್ಲಾಡಳಿತಕ್ಕೆ ಮಾರ್ಗೋಪಾಯಗಳನ್ನು ನೀಡಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ. ಜಬ್ಬಾರ್‌, ‘ಜಿಲ್ಲೆಯಲ್ಲಿ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮ ಅಕ್ಟೋಬರ್ 6 ರ ವರೆಗೆ ನಡೆಯಲಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಶೇ 100 ರಷ್ಟು ಗುರಿ ಸಾಧಿಸಲು ಶ್ರಮಿಸಬೇಕು’ ಎಂದು ಹೇಳಿದರು.

‘ಔಷಧಿ ಸೇವನೆಯ ನಂತರ ಉಂಟಾಗುವ ಸೌಮ್ಯ ರೀತಿಯ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಲು ಜಿಲ್ಲೆಯಲ್ಲಿ 62 ತಂಡಗಳನ್ನು ರಚಿಸಲಾಗಿದೆ’ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ ಮಾತನಾಡಿದರು. ಡಾ. ಅನೀಲಕುಮಾರ ಚಿಂತಾಮಣಿ, ಡಾ. ಸಿ.ಎಸ್.ರಗಟೆ, ಡಾ. ಸಂಜೀವಕುಮಾರ ಪಾಟೀಲ, ಡಾ.ಮಾರ್ಥಂಡರಾವ್ ಕಾಶೆಂಪೂರಕರ್, ಜಾನೆಟ್ ಮೆನಿಜಿಸ್, ಸುಭಾಷ ಮುಧಾಳೆ, ಶಾಂತಪ್ಪ ಸುಂದರಕರ್, ಮಲ್ಲಿಕಾರ್ಜುನ ಸದಾಶಿವ, ರಾಜು ಕುಲರ್ಣಿ, ಮಹೆಬೂಬಮಿಯಾ, ಓಂಕಾರ ಮಲ್ಲಿಗೆ ಇದ್ದರು.

ಪ್ರಾಚಾರ್ಯ ರಾಜಕುಮಾರ ಮಾಳಗೆ ಸ್ವಾಗತಿಸಿದರು. ಪ್ರಕಾಶ ಬಿ.ಎಂ. ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.