
ಬೀದರ್: ಯುವ ರಾಷ್ಟ್ರೀಯ ಬಸವ ದಳ ಹಾಗೂ ಡಾ.ಮಾತೆ ಮಹಾದೇವಿ ಬಸವ ಬಳಗದಿಂದ ನಗರದ ಮೈಲೂರ ಕ್ರಾಸ್ನಲ್ಲಿರುವ ಬಸವ ದಳದ ಕಚೇರಿಯಲ್ಲಿ ಭಾನುವಾರ ರಾತ್ರಿ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.
ಸಂವಿಧಾನ ಸಂರಕ್ಷಣಾ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ ಕಾರ್ಯಕ್ರಮ ಉದ್ಘಾಟಿಸಿ,‘ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ವೈಚಾರಿಕ ಚಿಂತನೆಗಳು ಇಂದಿನ ಯುವಕರಿಗೆ ಆದರ್ಶವಾಗಬೇಕಿದೆ. ಬುದ್ಧನು ತ್ರಿಪಿಟಿಕದಲ್ಲಿ ಸಾರಿದ ಸಮಾನತೆ ಮತ್ತು ಬಸವಣ್ಣನವರ ವಚನಗಳಿಂದ ನಡೆದ ಸಾಮಾಜಿಕ ಕ್ರಾಂತಿಯ ವಿಚಾರಗಳನ್ನು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಜಾರಿಗೆ ತಂದಿದ್ದಾರೆ’ ಎಂದು ಹೇಳಿದರು.
‘ಬುದ್ಧ, ಬಸವ, ಅಂಬೇಡ್ಕರ್ ಜಗತ್ತಿನ ಶ್ರೇಷ್ಠ ಸಮಾನತೆಯ ಹರಿಕಾರರು. ಇವರ ಆದರ್ಶಗಳನ್ನು ಮರೆಮಾಚಲು ಕೆಲವು ಸಂಘ–ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇವರ ಆದರ್ಶಗಳು ಸದಾ ಜನರ ಮಧ್ಯೆ ಜೀವಂತವಾಗಿರಬೇಕಾದರೆ ಲಿಂಗಾಯತರು, ದಲಿತರು, ಶೋಷಿತ ವರ್ಗದವರು ಒಂದಾಗಬೇಕಿದೆ. ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳನ್ನು ಜಗತ್ತಿಗೆ ಸಾರಬೇಕಾಗಿದೆ’ ಎಂದು ತಿಳಿಸಿದರು.
ಪೂಜಾ ಗಣೇಶ ಬಿರಾದಾರ ಸಂವಿಧಾನ ಪೀಠಿಕೆ ಓದಿಸಿದರು. ಮುಖಂಡರಾದ ಶಿವಶರಣಪ್ಪ ಹುಗ್ಗೆ ಪಾಟೀಲ, ಪ್ರದೀಪ ನಾಟೇಕರ್, ಶರಣಯ್ಯ ಸ್ವಾಮಿ, ಶಂಕರ ಬಿರಾದಾರ, ಜಗನ್ನಾಥ ಸ್ವಾಮಿ, ಸುರೇಶ ಸ್ವಾಮಿ, ಗಣೇಶ ಬಿರಾದಾರ, ಸಿದ್ದು ಶೆಟಕಾರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.