ADVERTISEMENT

ಬೀದರ್: ಖಾತರಿ ಕೆಲಸ ನಮ್ಮನ್ನು ಬದುಕಿಸಿತು

ನರೇಗಾ ಆಯುಕ್ತ ಅನಿರುದ್ಧ್‌ ಎದುರು ಸಂತಸ ಹಂಚಿಕೊಂಡ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 9:35 IST
Last Updated 7 ಜೂನ್ 2020, 9:35 IST
ಬಸವಕಲ್ಯಾಣ ತಾಲ್ಲೂಕಿನ ಪ್ರತಾಪುರ ಕೆರೆ ಕಾಮಗಾರಿಯನ್ನು ಉದ್ಯೋಗ ಖಾತರಿ ಯೋಜನೆ ರಾಜ್ಯ ಆಯುಕ್ತ ಅನಿರುದ್ಧ್‌ ಶ್ರವಣ ಶನಿವಾರ ಪರಿಶೀಲಿಸಿದರು
ಬಸವಕಲ್ಯಾಣ ತಾಲ್ಲೂಕಿನ ಪ್ರತಾಪುರ ಕೆರೆ ಕಾಮಗಾರಿಯನ್ನು ಉದ್ಯೋಗ ಖಾತರಿ ಯೋಜನೆ ರಾಜ್ಯ ಆಯುಕ್ತ ಅನಿರುದ್ಧ್‌ ಶ್ರವಣ ಶನಿವಾರ ಪರಿಶೀಲಿಸಿದರು   

ಬಸವಕಲ್ಯಾಣ: ‘ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಊಟಕ್ಕೂ ಗತಿ ಇಲ್ಲದಂತಾದಾಗ ಉದ್ಯೋಗ ಖಾತರಿ ಯೋಜನೆ ನೆರವಾಯಿತು’ ಎಂದು ತಾಲ್ಲೂಕಿನ ಪ್ರತಾಪುರ ಕೆರೆಯಲ್ಲಿ ನಡೆಯುತ್ತಿರುವ ಕೃಷಿ ಹೊಂಡ ನಿರ್ಮಾಣ ಕಾಮಗಾರಿಯ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ನರೇಗಾ ರಾಜ್ಯ ಆಯುಕ್ತ ಅನಿರುದ್ಧ್‌ ಶ್ರವಣ ಅವರ ಎದುರು ಕೂಲಿ ಕಾರ್ಮಿಕರು ಸಂತಸ ಹಂಚಿಕೊಂಡರು.

‘ಪ್ರತಿದಿನ ಕೆಲಸ ಒದಗಿಸಲಾಗುತ್ತಿದೆ. ವಾರಕ್ಕೊಮ್ಮೆ ಕೂಲಿ ಹಣ ಬರುತ್ತದೆ. ಕೊರೊನಾ ಕಾರಣ ಮಹಾನಗರಗಳಲ್ಲಿನ ಉದ್ಯೋಗಗಳು ಬಂದ್ ಆಗಿರುವ ಕಾರಣ ನಮಗೆ ಎಲ್ಲಿಗೂ ಹೋಗಲಾಗುವುದಿಲ್ಲ. ಆದ್ದರಿಂದ ಖಾತರಿ ಕಾಮಗಾರಿಯಲ್ಲಿ ಪ್ರತಿಯೊಬ್ಬರಿಗೆ 100 ದಿನದ ಬದಲು ಇನ್ನೂ ಹೆಚ್ಚಿನ ದಿನ ಕೆಲಸ ಒದಗಿಸಬೇಕು’ ಎಂದೂ ಮನವಿ ಮಾಡಲಾಯಿತು.

ಪ್ರತಾಪುರ ಕೆರೆ, ಸಮೀಪದ ನೀಲಕಂಠ ಕೆರೆ, ಮಂಠಾಳದ ಕಾಮಗಾರಿ ವೀಕ್ಷಿಸಿದ ಅನಿರುದ್ಧ್‌ ಶ್ರವಣಅವರು ‘ಇಲ್ಲಿ ಕೃಷಿ ಹೊಂಡ, ಚೌಕಿ ಹಾಗೂ ಕ್ಷೇತ್ರ ಬದು ನಿರ್ಮಾಣದ ಕೆಲಸ ಉತ್ತಮವಾಗಿ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳು ಜನರ ಕುರಿತು ಕಾಳಜಿ ವಹಿಸಿರುವುದು ಇಲ್ಲಿ ನಡೆದಿರುವ ಕೆಲಸದಿಂದ ಗೊತ್ತಾಗುತ್ತದೆ. ಇನ್ನು ಮುಂದೆಯೂ ಯಾವುದೇ ತೊಂದರೆ ಆಗದಂತೆ ಎಲ್ಲರಿಗೂ ಕೆಲಸ ನೀಡಿ’ ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಇಒ ಮಡೋಳಪ್ಪ ಪಿ.ಎಸ್.ನರೇಗಾ ತಾಲ್ಲೂಕು ಯೋಜನಾಧಿಕಾರಿ ಜಯಪ್ರಕಾಶ ಚವಾಣ್, ಶಿವರಾಜ ಪಾಟೀಲ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲನಗೌಡ ಬಿರಾದಾರ ಹಾಗೂ ಮುಕೇಶ ಪಾಟೀಲ ಸೇರಿದಂತೆ ಹಲವರು ಈ ವೇಳೆ ಸ್ಥಳದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.