ಅಲಿಯಂಬರ್ (ಜನವಾಡ): ‘ಜಾತಿಕೇಂದ್ರಿತ ದೇವಾಲಯ, ಮಠಮಾನ್ಯಗಳಿಗೆ ಉದಾರ ದೇಣಿಗೆ ನೀಡುವ ನಮ್ಮ ಸರ್ಕಾರಗಳು ಕನ್ನಡ ಭವನಕ್ಕೆ ಹಣ ನೀಡಲು ಹಿಂದೇಟು ಹಾಕವುದು ಕೂಡ ಕನ್ನಡ ಹಾಗೂ ಕನ್ನಡಿಗರ ವಿರೋಧಿ ನಿಲುವಿಗೆ ಸಮಾನವಾಗಿದೆ’ ಎಂದು ಸಾಹಿತಿ ಬಸವರಾಜ ಬಲ್ಲೂರ ಅಸಮಾಧಾನ ಹೊರ ಹಾಕಿದರು.
ಬೀದರ್ ತಾಲ್ಲೂಕಿನ ಅಲಿಯಂಬರ್ದಲ್ಲಿ ನಡೆದ ಬೀದರ್ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದರು.
‘ಸಮೃದ್ಧ ಭಾಷೆ ನಾಗರಿಕತೆಯ ಅಭಿವೃದ್ಧಿಗೆ ಪೂರಕ. ಭಾಷೆ ಗಟ್ಟಿಯಾಗಿ ನೆಲೆಗೊಂಡರೆ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಬಲವಾಗಿ ಬೇರೂರುತ್ತದೆ. ಜಾತಿಯೇ ಪ್ರಧಾನವಾದರೆ ವಿಘಟನೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಇಂದು ಪ್ರಜಾಪ್ರಭುತ್ವದ ನೆಲೆಯಲ್ಲಿ ಸೇವೆ ಒದಗಿಸುವ ಧಾರ್ಮಿಕ ಸಂಸ್ಥೆಗಳು ನಮ್ಮ ಮಧ್ಯೆ ಉಳಿದಿಲ್ಲ’ ಎಂದರು.
‘ಪ್ರಜಾಪ್ರಭುತ್ವವನ್ನು ಮತ ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಜನ ಸಾಮಾನ್ಯರ ತೆರಿಗೆ ಹಣ ಪೋಲಾಗಬಾರದು. ಧಾರ್ಮಿಕ ಸಂಸ್ಥೆಗಳು ಹಣಕ್ಕಾಗಿ ಜೊಲ್ಲು ಸುರಿಸಬಾರದು. ಹೀಗೆ ಮಾಡುವುದರಿಂದ ಸಮಾಜವನ್ನೇ ಅಪಾಯದ ಸ್ಥಿತಿಗೆ ತಂದು ನಿಲ್ಲಿಸುವಂತೆ ಆಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಆಳುವ ವರ್ಗ ಕನ್ನಡ ಶ್ರೇಷ್ಠತೆ ಅರಿಯಲಿ: ‘ಆಳುವ ವರ್ಗದವರು ಇಂದಿಗೂ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಆಳವಾಗಿ ಅರ್ಥ ಮಾಡಿಕೊಂಡಿಲ್ಲ. ಜನ ಜಾಗೃತಿಗೊಳಿಸುವ ನಿಟ್ಟಿಯಲ್ಲಿ ಇಂತಹ ಸಮ್ಮೇಳನಗಳು ಗ್ರಾಮ ಮಟ್ಟದಲ್ಲೂ ನಡೆಯಬೇಕು’ ಎಂದು ಹೇಳಿದರು.
‘ಕನ್ನಡ ಪ್ರಪಂಚದಲ್ಲಿಯೇ 4ನೇ ಪ್ರಾಚೀನ ಭಾಷೆಯಾಗಿದೆ. ಕನ್ನಡಕ್ಕೆ 2000 ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಭಾಷಾ ಸಿರಿವಂತಿಕೆಯಿಂದಾಗಿಯೇ ಕನ್ನಡಕ್ಕೆ ಇದುವರೆಗೂ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ’ ಎಂದು ತಿಳಿಸಿದರು.
‘ಅಕ್ಷರ ಜ್ಞಾನ ಇಲ್ಲದಿದ್ದರೂ ಹಾಡುಗಳನ್ನು ರಚಿಸುವ ಸಾಮರ್ಥ್ಯ ಕನ್ನಡಿಗರಿಗೆ ಇದೆ. ಈ ಮಾತನ್ನು ಸಾವಿರ ವರ್ಷಗಳ ಹಿಂದೆಯೇ ಅಮೋಘವರ್ಷನ ಕವಿರಾಜಮಾರ್ಗದಲ್ಲಿಯೇ ಉಲ್ಲೇಖಿಸ ಲಾಗಿದೆ. ಕುವೆಂಪು ಪಡೆದಿರುವ ಸಾಹಿತ್ಯ ಪ್ರಶಸ್ತಿಗಳನ್ನು ಬೇರಾವ ಭಾರತೀಯ ಸಾಹಿತಿಯೂ ಪಡೆದಿಲ್ಲ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.