ಔರಾದ್: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ಲಾಕ್ಡೌನ್ ಸಂತ್ರಸ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.
ಲಾಕ್ಡೌನ್ನಿಂದ ಬಡವರು, ಕಾರ್ಮಿಕರು, ವಲಸಿಗರು ಸೇರಿದಂತೆ ಸಾಕಷ್ಟು ಜನ ಕೆಲಸ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅಂತವರನ್ನು ಗುರುತಿಸಿ ಅವರಿಗೆ ನಿತ್ಯ ಎರಡು ಹೊತ್ತು ಊಟ ಕೊಡುವ ಮಾನವೀಯ ಕಾರ್ಯಕ್ಕೆ ಸಚಿವ ಪ್ರಭು ಚವಾಣ್ ಗುರುವಾರ ಚಾಲನೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಸಾಲಾಗಿ ನಿಂತ ನೂರು ಜನ ಕಾರ್ಮಿಕರಿಗೆ ತಲಾ 500 ಗ್ರಾಂ. ಪಲಾವ್, 250 ಗ್ರಾಂ. ಕೇಸರಿ ಭಾತ್ ಪ್ಯಾಕೇಟ್ ಕೊಟ್ಟು ಅವರಲ್ಲಿ ಧೈರ್ಯ ತುಂಬಿದರು. ನೀವು ಯಾವುದೇ ಕಾರಣಕ್ಕೂ ಹೆದರಬೇಡಿ. ಲಾಕ್ಡೌನ್ ಮುಗಿಯುವ ತನಕ ನಿಮ್ಮ ಮನೆ ತನಕ ನಿತ್ಯ ಎರಡು ಹೊತ್ತು ಅನ್ನ ತಂದು ಕೊಡುತ್ತೇವೆ ಎಂದು ಹೇಳಿದರು.
ಕೇವಲ ಔರಾದ್ ಅಷ್ಟೇ ಅಲ್ಲ, ಕ್ಷೇತ್ರದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲುಬಾರದು. ಯಾರಿಗೆ ಇಂತಹ ಸಂಕಷ್ಟ ಇದೆ. ಅಲ್ಲಿ ತಾವು ತಮ್ಮ ವೈಯಕ್ತಿಕ ಖರ್ಚಿನಿಂದ ಜನರಿಗೆ ಅನ್ನ ಕೊಡಲು ಸಿದ್ಧ ಎಂದು ಸಚಿವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಕಳೆದ ವರ್ಷವೂ ಲಾಕ್ಡೌನ್ ಮುಗಿಯುವ ತನಕ ಈ ರೀತಿ ದಾಸೋಹ ವ್ಯವಸ್ಥೆ ಮಾಡಿದ್ದು ಜನರಿಗೆ ನೆನಪಿದೆ. ಅದೇ ಕಾರ್ಯ ಈ ವರ್ಷವೂ ಮಾಡುತ್ತಿದ್ದೇನೆ. ಈಗ ಸದ್ಯ 800ರಿಂದ 1000 ಜನರಿಗೆ ಬೇಕಾಗುವಷ್ಟು ಆಹಾರ ಸಿದ್ಧ ಮಾಡಲಾಗುತ್ತಿದೆ. ಹೆಚ್ಚಿನ ಬೇಡಿಕೆ ಬಂದರೆ ಅವರಿಗೂ ಆಹಾರ ಕೊಡುತ್ತೇವೆ ಎಂದು ತಿಳಿಸಿದರು.
ಲಾಕ್ಡೌನ್ನಿಂದಾಗಿ ಜನ ತೊಂದರೆ ಪಡಬಾರದು. ಈ ಕಾರಣ ಸರ್ಕಾರ ಕೂಡ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಆಹಾರ ಕೊಡುವ ವ್ಯವಸ್ಥೆ ಮಾಡಿದೆ. ನಮ್ಮ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಯಾರಿಗೂ ತೊಂದರೆ ಆಗಬಾರದು. ಹಾಸಿಗೆ, ಔಷಧ, ಆಮ್ಲಜನಕ ಸೇರಿದಂತೆ ಯಾವುದೇ ಕೊರತೆ ಆಗದಂತೆ ನಿರಂತರವಾಗಿ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಜತೆ ಸಂಪರ್ಕದಲ್ಲಿರುವುದಾಗಿ ಹೇಳಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ಪೋಕಲವಾರ, ಧುರೀಣ ರಮೇಶ ದೇವಕತೆ, ಶರಣಪ್ಪ ಪಂಚಾಕ್ಷರಿ, ರಾಮಶೆಟ್ಟಿ ಪನ್ನಾಳೆ, ಕೇರಬಾ ಪವಾರ್, ಯಾದವ ಮೇತ್ರೆ, ಶರಣಬಸವ ಸಾವಳೆ, ಪ್ರಕಾಶ ಜೀರ್ಗೆ ವಡಗಾಂವ್, ಪ.ಪಂ ಮುಖ್ಯಾಧಿಕಾರಿ ರವಿ ಸುಕುಮಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.