ಹುಮನಾಬಾದ್: ಡಾ.ಬಿ.ಆರ್. ಅಂಬೇಡ್ಕರ್ ಅವರ ರಾಜಗೃಹ ನಿವಾಸದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಭೀಮ್ ಆರ್ಮಿ ಭಾರತ ಏಕತಾ ಮಿಷನ್ನ ತಾಲ್ಲೂಕು ಘಟಕದ ವತಿಯಿಂದ ಉಪ ತಹಶೀಲ್ದಾರ್ ಕರೀಂ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಭೀಮ್ ಆರ್ಮಿ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ದೊಡ್ಡಿ ಮಾತನಾಡಿ,‘ಭಾರತಕ್ಕೆ ಮೌಲ್ಯಯುತವಾದ ಸಂವಿಧಾನ ಕೊಟ್ಟ ವಿಶ್ವ ನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ವಾಸವಾಗಿದ್ದ ರಾಜ ಗೃಹದ ಮೇಲೆ ಕೆಲ ದೇಶದ್ರೋಹಿಗಳು ದಾಳಿ ನಡೆಸಿದ್ದಾರೆ. ಇದು ತೀವ್ರ ಖಂಡನೀಯ’ ಎಂದರು.
ದೇಶದ ಕೋಮುವಾದಿಗಳ ಬೆಂಬಲದಿಂದ ಕೆಲವರು ದಿನನಿತ್ಯ ಶೋಷಿತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಸರ್ಕಾರ ಅವರನ್ನು ಶಿಕ್ಷಿಸುತ್ತಿಲ್ಲ. ಪರಿಶಿಷ್ಟರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಬೇಕು. ಜತೆಗೆ ಮುಂಬೈನ ರಾಜಗೃಹದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಘಟನೆಯ ತಾಲ್ಲೂಕು ಘಟಕದ ಉಪಾಧ್ಯಕ್ಷ ಮನೋಜಕುಮಾರ ಜಾನವೀರ, ನಗರ ಘಟಕದ ಅಧ್ಯಕ್ಷ ವಿನಾಯಕ ಮೇಲಕೇರಿ, ಉಪಾಧ್ಯಕ್ಷ ಓಂಕಾರ ಜಂಜೀರ, ಗೌತಮ ಜಾನವೀರ, ಪ್ರಮುಖರಾದ ನರಸಪ್ಪ ಪರಸನೋರ್, ಸುಭಾಷ ಆರ್ಯ, ಸುರೇಶ ಘಾಂಗ್ರೆ, ವೀರಪ್ಪ ಧುಮನಸೂರ, ಶರಣಪ್ಪ ದಂಡೆ, ಪಾಂಡುರಂಗ ವಕೀಲ ಹಾಗೂ ಸುನೀಲ ಹಣಕುಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.