
ಔರಾದ್: ‘ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೂಲಕ ಸ್ವಸಹಾಯ ಸಂಘಗಳ(ಎಸ್ಎಚ್ಜಿ) ಮೂಲಕ ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕೆ ನೆರವು ನೀಡಲಾಗುತ್ತಿದೆ ಎಂದು ಹಣೇಗಾಂವ ಮಠದ ಶಂಕರಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿಯ ಕನಕ ಭವನದಲ್ಲಿ ಮಂಗಳವಾರ ಸ್ವಸಹಾಯ ಗುಂಪಿನ ಮಹಿಳೆಯರಿಂದ ಸಾಮೂಹಿಕ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
‘ಮಹಿಳೆಯರಿಂದ ಗ್ರಾಮೀಣ ಭಾಗದಲ್ಲಿ ಬದಲಾವಣೆ ಆಗಿದೆ. ಅನೇಕ ಮಹಿಳೆಯರು ತಮ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಿದ್ದಾರೆ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ’ ಎಂದು ಹೇಳಿದರು.
‘ಈ ಬಾರಿ ಧರ್ಮಸ್ಥಳ ಸಂಸ್ಥೆ ವತಿಯಿಂದ ಆಯೋಜಿಸಿದ ಮದ್ಯವರ್ಜನ ಶಿಬಿರ ಯಶಸ್ವಿಯಾಗಿ ನಡೆದಿದೆ. ಸುಮಾರು 50ಕ್ಕೂ ಹೆಚ್ಚು ಜನ ವ್ಯಸನದಿಂದ ಹೊರ ಬಂದಿದ್ದಾರೆ. ಇಂತಹ ಕಾರ್ಯಗಳಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ’ ಎಂದು ತಿಳಿಸಿದರು.
ಮುಖಂಡ ಅಶೋಕ ಶೆಂಬೆಳ್ಳಿ, ಶಾಲಿವಾನ ಉದಗಿರೆ ಮಾತನಾಡಿ, ‘ಧರ್ಮಸ್ಥಳ ಸಂಸ್ಥೆಯಿಂದ ಅನಾಥರಿಗೆ ಮಾಸಾಶನ, ಮನೆ, ಅವರ ಮಕ್ಕಳಿಗೆ ಶಿಷ್ಯವೇತನ ನೀಡುವ ಕಾರ್ಯ ನಿಜಕ್ಕೂ ಸಮಾಜಮುಖಿಯಾಗಿದೆ’ ಎಂದು ಹೇಳಿದರು.
ಕ್ಷೇತ್ರ ಯೋಜನಾಧಿಕಾರಿ ರಾಘವೇಂದ್ರ ಸ್ವಾಗತಿಸಿದರು. ಪತ್ರಕರ್ತ ಅನೀಲ ದೇಶಮುಖ, ಮುಖಂಡ ಶ್ರೀನಿವಾಸ ಖೂಬಾ, ಅಶೋಕ ಅಲ್ಮಾಜೆ, ಮಾರುತಿ ವಾಡೆಕರ, ವಿದ್ಯಾಸಾಗರ, ಲಕ್ಷ್ಮಿಕಾಂತ, ಆದೇಶಕುಮಾರ ಹಾಗೂ ಸ್ವಸಹಾಯ ಗುಂಪಿನ ಸದಸ್ಯರು ಹಾಜರಿದ್ದರು. ವ್ಯಸನದಿಂದ ಮುಕ್ತಿ ಪಡೆದವರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.